ಉಪ್ಪಿನಂಗಡಿ: ಫೆ.09 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ 07/2026, ಕಲಂ 194 (III)(IV) BNSS 2023 ಅಡಿ ದಾಖಲಾಗಿದ್ದ ಪ್ರಕರಣವು ಇದೀಗ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ.
ಪ್ರಕರಣದಲ್ಲಿ ಕೆ.ಸಿ. ವರ್ಗೀಸ್ (73) ಎಂಬವರು ಮೃತಪಟ್ಟಿದ್ದು, ವೈದ್ಯಕೀಯ ವರದಿ ಪ್ರಕಾರ ತಲೆಗೆ ಉಂಟಾದ ಗಂಭೀರ ಹಲ್ಲೆ ಹಾಗೂ ದೇಹದ ಇತರ ಭಾಗಗಳಿಗೆ ಆಗಿರುವ ಗಾಯಗಳೇ ಸಾವಿಗೆ ಕಾರಣವೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದಿನಾಂಕ ಫೆ.13 ರಂದು ಪ್ರಕರಣವನ್ನು ಅ.ಕ್ರ:21/2026 u/s 103(1) BNS-2023 ಅಡಿ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಲಾಗಿದೆ.
ತನಿಖೆಯಲ್ಲಿ ತಿಳಿದುಬಂದಂತೆ, ಮೃತ ಕೆ.ಸಿ. ವರ್ಗೀಸ್ ಅವರು ತಮ್ಮ ಪತ್ನಿಗೆ ಹಲ್ಲೆ ನಡೆಸಿದ್ದು, ಆಕೆ ಮನೆಯಿಂದ ಹೊರಗೆ ಸ್ವಲ್ಪ ದೂರ ಹೋಗಿ ಕುಳಿತಿದ್ದರು. ಈ ವಿಷಯವನ್ನು ಒಬ್ಬ ವ್ಯಕ್ತಿ ಅವರ ಪುತ್ರ ಕೆ.ವಿ. ತೋಮಸ್ಗೆ ತಿಳಿಸಿದ್ದು, ತೋಮಸ್ ಅವರು ಪರಿಚಯದ ಆಟೋ ರಿಕ್ಷಾ ಚಾಲಕರ ಮೂಲಕ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಾನೆ.
ಈ ವೇಳೆ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು, ತಮ್ಮ ಸಹೋದರ ಚಾಕೊಚ್ಚನಿಗೆ ಕರೆ ಮಾಡಿ ವಿಷಯ ತಿಳಿಸಿ, ಸ್ಥಳಕ್ಕೆ ಬರುವಂತೆ ಕರೆದಿದ್ದಾರೆ. ನಂತರ ತೋಮಸ್ರನ್ನು ಸ್ವಲ್ಪ ದೂರ ಕಳುಹಿಸಿ, ಚಾಕೊಚ್ಚ ಹಾಗೂ ರಾಜು ಇಬ್ಬರೂ ಮನೆ ಒಳಗೆ ಹೋಗಿ ಕೆ.ಸಿ. ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ತೋಮಸ್ ಅವರಿಗೆ “ಸರಿಯಾಗಿ ಹೊಡೆದಿದ್ದೇವೆ, ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಿ” ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ, ತೋಮಸ್ ಅವರು ತಮ್ಮ ತಂದೆ ಮಂಚದಿಂದ ಕೆಳಗೆ ಬಿದ್ದು ಕಲ್ಲಿಗೆ ತಲೆ ತಾಗಿ ಮೃತಪಟ್ಟಿರಬಹುದು ಎಂದು ತಿಳಿಸಿ, ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ತಿಳಿಸಿದ್ದರು. ಆದರೆ ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಕೆ.ವಿ. ತೋಮಸ್ @ ವಿಲ್ಸನ್ (39), ನೆಲ್ಯಾಡಿ, ಕಡಬ ತಾಲೂಕು, ಸಿ.ಟಿ. ರಾಜು @ ವರ್ಗೀಸ್ (59) ಅರಸಿನಮಕ್ಕಿ, ಬೆಳ್ತಂಗಡಿ ತಾಲೂಕು, ಹಾಗೂ ಚಾಕೊಚ್ಚ (51), ನೆಲ್ಯಾಡಿ, ಕಡಬ ತಾಲೂಕು ಇವರನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
