ಉಳ್ಳಾಲ: ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿ 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸುಮಾರು ರೂ 1 ಕೋಟಿ 20 ಲಕ್ಷ ವಂಚನೆ ಮಾಡಿರುವ ಬೆಂಗಳೂರು ಉಪ್ಕಾರ್ ಲೇ ಔಟ್, ವಿಶ್ವನಿಧಂ ಮೂಲದ ಆರೋಪಿ ಅಜಯ್ ಪ್ರಸಾದ್( 41) ಮೇಲೆ ಉಳ್ಳಾಲ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದವು.
Nano Forex India ಎಂಬ ಸಂಸ್ಥೆಯ forex Robot Software ಮೂಲಕ ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ 40% ಲಾಭ ಹಾಗೂ 20% ಮರುಪಾವತಿ ನೀಡುವುದಾಗಿ ನಂಬಿಸಿ, ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ನೀಡಿ ವಿಶ್ವಾಸ ಹುಟ್ಟಿಸಿ, ಪ್ರೊರೆಕ್ಸ್ ರೋಬೋಟ್ ಸಾಫ್ಟ್ವೇರ್ ಬಳಸಲು ಅವಕಾಶ ನೀಡುವುದಾಗಿ ತಿಳಿಸಿ, ವಿವಿಧ ಗ್ರಾಹಕರಿಂದ ಸುಮಾರು 1 ಕೋಟಿ 20 ಲಕ್ಷ ಹಣವನ್ನು ಪಡೆದುಕೊಂಡಿರುತ್ತಾರೆ. ಆದರೆ ಹಣಕ್ಕೆ ಯಾವುದೇ ಲಾಭ ಅಥವಾ ಮರುಪಾವತಿ ನೀಡದೇ, ಹಣವನ್ನು ದುರುಪಯೋಗಪಡಿಸಿ ವಂಚನೆ ನಡೆಸಿರುವುದಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2011 ನೇ ಸಾಲಿನಲ್ಲಿ 3 ಪ್ರಕರಣಗಳು ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪೈಕಿ ತಲೆಮರೆಸಿಕೊಂಡಿರುವ ಮತ್ತು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಫೆ. 20ರಂದು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಮಂಗಳೂರು ನಗರದ ಮಾನ್ಯ 7 ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ ಎಂದು ಪೋಲಿಸರು ತಿಳಿಸಿದ್ದಾರೆ.
