ಮಂಗಳೂರಿನ ಆಡಳಿತ ಸೌಧದ ನಾಮಫಲಕದ ಬೋರ್ಡ್ ಮಾಯಾವಾಗಿದೆ. ನಗರದ ಕೇಂದ್ರದಲ್ಲಿರುವ ಈ ಆಡಳಿತ ಸೌಧಕ್ಕೆ ದಿನಕ್ಕೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಆದರೆ ಇಲ್ಲಿನ ನಿರ್ವಹಣೆ ಮಾತ್ರ ಕುಂಟುತ್ತಾ ಇದೆ.
ಬೋರ್ಡ್ ಇರದ ನಗರದ ಆಡಳಿತ ಸೌಧದಲ್ಲಿ ಕೆಲ ಅಧಿಕಾರಿಗಳು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ. ಸುಮಾರು 6–7 ವರ್ಷಗಳಿಂದ ಡಿಟಿ (Deputy Tahsildar) ವರ್ಗಾವಣೆಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ತಹಸೀಲ್ದಾರ್ ಇದ್ದರೂ ಸಹ ಆಡಳಿತದ ಪ್ರಮುಖ ನಿರ್ವಹಣೆ ಈ ಡಿಟಿಯವರೇ ನೋಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳಿಗೆ ನಿಯಮಿತ ಅವಧಿಯ ಬಳಿಕ ವರ್ಗಾವಣೆ ಮಾಡುವ ನಿಯಮವಿದ್ದರೂ, ಇಷ್ಟು ವರ್ಷಗಳಿಂದ ಯಾವುದೇ ವರ್ಗಾವಣೆಯಾಗದಿರುವುದು ಪ್ರಶ್ನಾರ್ಥಕವಾಗಿದೆ. ಅದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಮತ್ತು ಎಸಿಪಿ ಹುದ್ದೆಗಳಿಗೆ ಕಡ್ಡಾಯ ವರ್ಗಾವಣೆ ಆದೇಶಗಳನ್ನು ನೀಡಲಾಗುತ್ತಿರುವಾಗ, ಕಂದಾಯ ಇಲಾಖೆಯ ಈ ರೀತಿಯ ಪ್ರಕರಣಗಳು ಸರ್ಕಾರದ ಗಮನಕ್ಕೆ ಏಕೆ ಬಂದಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.
ಇದಲ್ಲದೆ, ಮಿನಿ ವಿಧಾನಸೌಧದಲ್ಲಿ ಕೆಲಸ ಮಾಡುವ ವಿಲೇಜ್ ಅಕೌಂಟೆಂಟ್ಗಳ ಕಾರ್ಯವೈಖರಿಯ ಮೇಲೂ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ಪಡೆಯಲು ಮನೆಯಲ್ಲಿ ಇರುವ ದಾಖಲೆಗಳು, ಮನೆ ಒಪ್ಪಂದ, ಐಟಿಆರ್ ಸೇರಿದಂತೆ ಹಲವು ದಾಖಲೆಗಳನ್ನು ಕೇಳಲಾಗುತ್ತಿದೆ ಎಂಬ ದೂರಿದೆ. ಆದರೆ, ಆರ್ಟಿಸಿ ತಿದ್ದುಪಡಿ ಅಥವಾ ಭೂ ಪರಿವರ್ತನೆ (ಕನ್ವರ್ಷನ್) ಕೆಲಸಗಳಿಗೆ ಕೆಲ ದಲ್ಲಾಳಿಗಳ ಮೂಲಕ ಹೋದರೆ ಹಣದ ಮೂಲಕ ಕೆಲಸಗಳನ್ನು ಶೀಘ್ರವಾಗಿ ಮುಗಿಸಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ಬಗ್ಗೆ ಆಡಳಿತ ಸೌಧಕ್ಕೆ ಇಮೇಲ್ ಮೂಲಕ ಪ್ರತಿಯೊಬ್ಬ ಸಿಬ್ಬಂದಿಯ ಸೇವಾ ಅವಧಿ ಕುರಿತು ಮಾಹಿತಿ ಕೇಳಿದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದೂ ತಿಳಿದುಬಂದಿದೆ.
ಮಂಗಳೂರಿನಲ್ಲಿ ಭೂ ಸರ್ವೇ ಕಾರ್ಯಗಳೂ ಕೂಡ ಹಣದ ಕೊರತೆಯಿಂದ ವರ್ಷಗಳ ಕಾಲ ಮುಂದುವರಿಯದೇ ಇರುವುದಾಗಿ ನಾಗರಿಕರು ಆರೋಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಮುಂದುವರಿಯುತ್ತಿರುವ ಅಧಿಕಾರಿಗಳ ಬಗ್ಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಎಲ್ಲಾ ವಿಚಾರಗಳ ನಡುವೆ, ಕಂದಾಯ ಸಚಿವರು ಮತ್ತು ಸಂಬಂಧಿಸಿದ ಉನ್ನತ ಅಧಿಕಾರಿಗಳು ಈ ಸಮಸ್ಯೆಗಳತ್ತ ಗಮನ ಹರಿಸಬೇಕೆಂಬ ಒತ್ತಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
