ರಾಜ್ಯದಲ್ಲಿ ತಾಲ್ಲೂಕು ಕಚೇರಿಯಲ್ಲೇ ನಕಲಿ ದಾಖಲೆ ಸೃಷ್ಠಿ ಮಾಡುತ್ತಿದ್ದಂತ ಜಾಲವೊಂದು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಛೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ನಡೆಯುತ್ತಿರುವ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯದಲ್ಲಿ ನಕಲಿ ದಾಖಲೆಗಳನ್ನು ಸೇರಿಸಲು ಯತ್ನಿಸಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ತಹಶೀಲ್ದಾರ್ ರಶ್ಮಿ ಅವರು ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ದಿನಾಂಕ 18-03-2026 ರಂದು ಮಧ್ಯಾಹ್ನ ತಾಲೂಕು ಕಛೇರಿಯಲ್ಲಿ ಗಣಕೀಕರಣ ಕಾರ್ಯ ನಡೆಯುತ್ತಿದ್ದಾಗ, ಚುನಾವಣಾ ಶಿರಸ್ತೇದಾರರಾದ ರಾಮಾಂಜನೇಯ ಅವರು ಮೂರು ದರಖಾಸ್ತು ಮಂಜೂರಾತಿ ಕಡತಗಳನ್ನು ಅನಧಿಕೃತವಾಗಿ ಡಾಟಾ ಎಂಟ್ರಿ ಆಪರೇಟರ್ಗಳ ಮೂಲಕ ಸ್ಕ್ಯಾನ್ ಮಾಡಿಸಿ ಕಂಪ್ಯೂಟರ್ಗೆ ಸೇರಿಸಲು ಮುಂದಾಗಿದ್ದರು. ಈ ಕಡತಗಳು ನಕಲಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ವಿಚಾರಣೆ ನಡೆಸಿದಾಗ ದೊಡ್ಡ ಹಗರಣವೊಂದು ಬಯಲಾಗಿದೆ.
ತನಿಖೆಯಲ್ಲಿ ಬಯಲಾದ ಅಂಶಗಳು:
- ಲಂಚದ ಆಮಿಷ: ಭೂಮಾಪನ ಇಲಾಖೆಯ ಜವಾನ ಅವಿನಾಶ್ ಎಂಬುವವರು ಈ ನಕಲಿ ಕಡತಗಳನ್ನು ನೀಡಿದ್ದರು. ವಿಚಾರಣೆ ವೇಳೆ ಅವರು, ಸಾಗರದ ವಕೀಲರಾದ ಷಣ್ಮುಖ ಎಂಬುವವರು ಈ ನಕಲಿ ದಾಖಲೆಗಳನ್ನು ನೈಜ ಕಡತಗಳ ಜೊತೆ ಸೇರಿಸಲು ತನಗೆ 2 ಲಕ್ಷ ರೂಪಾಯಿ ಹಣ ನೀಡಿದ್ದರು ಎಂದು ಒಪ್ಪಿಕೊಂಡಿದ್ದಾರೆ.
- ಹಣ ಅಮಾನತ್ತು: ಆರೋಪಿಗಳ ಹೇಳಿಕೆಯ ಮೇರೆಗೆ ಕಾರೊಂದರ (ಬ್ರೆಜಾ ಸಂಖ್ಯೆ KA 15 P 5706) ಡ್ಯಾಶ್ಬೋರ್ಡ್ನಲ್ಲಿ ಇರಿಸಲಾಗಿದ್ದ ₹1,75,000 ನಗದನ್ನು ಪೊಲೀಸರು ಪಂಚನಾಮೆಯ ಮೂಲಕ ವಶಪಡಿಸಿಕೊಂಡಿದ್ದಾರೆ.
- ನಕಲಿ ಕಡತಗಳು: ಚನ್ನಶೆಟ್ಟಿಕೊಪ್ಪ ಮತ್ತು ಹಿರೇಮನೆ ಗ್ರಾಮಗಳಿಗೆ ಸಂಬಂಧಿಸಿದ ಸುಮಾರು 66 ಪುಟಗಳ ನಕಲಿ ಮಂಜೂರಾತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳ ಮೇಲೆ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು:
ಈ ಪ್ರಕರಣ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎ1 ಆರೋಪಿಯಾಗಿ ಸಾಗರ ತಹಶೀಲ್ದಾರ್ ಕಚೇರಿಯ ಶಿರೇಸ್ತೇದಾರರಾದಂತ ರಾಮಾಂಜನೇಯ, ಎ2 ಆರೋಪಿಯಾಗಿ ಜವಾನ ಅವಿನಾಶ್ ಎನ್ ಎಂ, ಎ3 ಆರೋಪಿಯಾಗಿ ವಕೀಲ ಷಣ್ಮುಖ, ಎ4 ಆರೋಪಿಯಾಗಿ ಹರಟೆ ಧರ್ಮಪ್ಪ, ಎ5 ಆರೋಪಿಯಾಗಿ ಲಕ್ಷ್ಮಣ ಪೂಜಾರಿ ಹಾಗೂ ಎ6 ಆರೋಪಿಯಾಗಿ ಹಾಲಮ್ಮ ಎಂಬುವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಒಟ್ಟಾರೆಯಾಗಿ ರಾಜ್ಯದಲ್ಲೊಂದು ತಾಲ್ಲೂಕು ಕಚೇರಿಯಲ್ಲೇ ಬೃಹತ್ ನಕಲಿ ದಾಖಲೆ ಸೃಷ್ಠಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಹಶೀಲ್ದಾರ್ ಕಚೇರಿಯಲ್ಲೇ ಹೀಗೆ ನಕಲಿ ದಾಖಲೆ ಸೃಷ್ಠಿಸೋ ಕೆಲಸ ಆದ್ರೇ, ಇನ್ನೂ ಜನಸಾಮಾನ್ಯರ ಪಾಡೇನು ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
