ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಎಂಬಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಗೆ ನುಗ್ಗಿದ ಅಟೊರಿಕ್ಷಾ ಚಾಲಕ ಸಜಿಪಮೂಡಾ, ಬಂಟ್ವಾಳ ನಿವಾಸಿ ಅಫ್ರೀಝ್ (28) ಎಂಬಾತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕಚೇರಿಯ ಸೊತ್ತುಗಳನ್ನು ಹಾನಿಗೊಳಿಸಿರುವ ಘಟನೆ ಮಾರ್ಚ್ 20ರಂದು ಸಂಜೆ ನಡೆದಿದೆ.
ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಕುನಲ್ ಭುಹ್ನಿಯಾ (27) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಕೆಎ 19 ಎಸಿ 2102 ನೊಂದಾವಣಿ ಸಂಖ್ಯೆಯ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದ ಚಾಲಕನು, ಏಜೆನ್ಸಿಯ ಒಳಗೆ ಪ್ರವೇಶಿಸಿ ಕಚೇರಿ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಅಶ್ವಿನ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿ, ನಂತರ ಕಚೇರಿಯ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳನ್ನು ಜಖಂಗೊಳಿಸಿದ್ದಾನೆ. ಈ ಕೃತ್ಯದಿಂದ ಸುಮಾರು 48,000/- ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಮೇರೆಗೆ ಬಂಟ್ವಾಳ ನಗರ ಠಾಣಾ ಅ.ಕ್ರ 36/2026 ಕಲಂ: 115(2), 287, 324(4), 351(2) 352 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.
