ಬೆಳಗಾವಿ : ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.81 ವರ್ಷದ ವೃದ್ಧ ಉದ್ಯಮಿಯನ್ನು ಬೆದರಿಸಿ ಸೈಬರ್ ವಂಚಕರು 15 ಕೋಟಿ ರೂ. ದೋಚಿರುವ ಘಟನೆ ನಡೆದಿದೆ.ದುಷ್ಕರ್ಮಿಗಳು ಡಾರ್ಕ್ ವೆಬ್ ಮೂಲಕ ವೃದ್ಧನ ಸಂಪರ್ಕಕ್ಕೆ ಬಂದು, ಅವರ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ.
ಬಳಿಕ ವಿಡಿಯೋ ಕಾಲ್ ಮಾಡಿ ತಾವು ಈಡಿ ಅಧಿಕಾರಿಗಳೆಂದು ನಂಬಿಸಿ, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. “ತನಿಖೆ ಪೂರ್ಣಗೊಳ್ಳುವವರೆಗೂ ನಿಮ್ಮ ಹಣವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಿ. ಅದು ಸುರಕ್ಷಿತವಾಗಿರುತ್ತದೆ. ನಂತರ ನಿಮ್ಮ ಖಾತೆಗೆ ಹಿಂದಿರುಗಿಸಲಾಗುತ್ತದೆ” ಎಂದು ನಂಬಿಸಿದ್ದಾರೆ ಎನ್ನಲಾಗಿದೆ.
. ಬಳಿಕ ವೃದ್ಧ ಉದ್ಯಮಿ ತಮ್ಮ ಖಾತೆಯಲ್ಲಿದ್ದ 15 ಕೋಟಿ ರೂ. ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.ಸೈಬರ್ ವಂಚಕರು ಅನುಮಾನ ಬಾರದಂತೆ ಕೆಲವು ದಿನಗಳ ಕಾಲ ಸಂಪರ್ಕದಲ್ಲಿದ್ದರು. ಬಳಿಕ ಸಂಪರ್ಕ ಕಡಿತವಾದಾಗ ಉದ್ಯಮಿ ಪೊಲೀಸರನ್ನು ಸಂಪರ್ಕಿಸಿ, ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದಾರೆ. ಈಗಾಗಲೇ 90 ಲಕ್ಷ ಹಣವನ್ನು ಮರುಪಡೆಯಲಾಗಿದೆ. ಉಳಿದ ಹಣದ ಪತ್ತೆಗಾಗಿ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಸೈಬರ್ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದು, ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
