ಕೊಪ್ಪಳ: ಲಂಚದ ಹಣ ಸ್ವೀಕರಿಸಿದ ಆರೋಪದ ಮೇಲೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿ(ಆರ್ಟಿಓ)ಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಂಜಿತ್ ಸಹಾಜಾನಂದ(30) ಆರ್ಟಿಓ ಕಚೇರಿ ದ್ವಿತೀಯ ದರ್ಜೆ ಸಹಾಯಕ, ಹಾಗೂ ವಿನಯಕುಮಾರ(32) ಡ್ರೈವಿಂಗ್ ಸ್ಕೂಲ್ ಗುಮಾಸ್ತ ಎಂದು ಗುರುತಿಸಲಾಗಿದೆ.
ಲಂಚ ನೀಡಲು ಇಚ್ಛಿಸದ ನಈಮ್ ಅಕ್ರಮ್ ಕೆ.ಎಸ್. ಎಂಬವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಶೋರೂಮ್ಗಳಿಗೆ ಟ್ರೇಡ್ ಲೈಸೆನ್ಸ್ ನೀಡಲು 21,000 ರೂ. ಲಂಚಕ್ಕೆ ಬೇಡಿಕೆ ಇಟ್ಟು, ಫೋನ್ಪೇ ಮೂಲಕ ಹಣ ಸ್ವೀಕರಿಸಿದ್ದಾಗಿ ಆರೋಪಿಸಲಾಗಿದೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ತನಿಖಾಧಿಕಾರಿ ಸುನೀಲ್(ಪಿಐ), ಇನ್ಸ್ಪೆಕ್ಟರ್ಗಳಾದ ಚಂದ್ರಪ್ಪ(ಪಿಐ) ಹಾಗೂ ಶೈಲಾ ಎಸ್. ಪಾಟೀಲ ಶೆಟ್ಟರ್ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿರುವುದಾಗಿ ವರದಿಯಿಂದ ತಿಳಿದುಬಂದಿದೆ.
