ಮಂಡ್ಯ: ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರೂ ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಪತ್ತೆ ಮಾಡಲಾಗಿದ್ದು, ಹಿರೇಮರಳಿ ಗ್ರಾಮದ ಕಿಶೋರ್ ಎಂಬಾತನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷ ಅಂದರೆ ಬಾಲಕನಿಗಿದ್ದ ಕಬಡ್ಡಿ ಕ್ರೇಜೇ ಆತನ ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ.
ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ 9ನೇ ತರಗತಿ ಓದುತ್ತಿದ್ದ ತಮ್ಮ ಪುತ್ರ ಕಿಶೋರ್ನನ್ನು ಮಂಡ್ಯ ತಾಲೂಕಿನ ತಂಗಳಗೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ಮತ್ತೆ 20 ದಿನ ಬಿಟ್ಟು ಶಾಲೆಗೆ ಬಂದು ಮಗನನ್ನ ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದಾಗ, ಆತ 20 ದಿನದಿಂದ ಶಾಲೆಗೆ ಬಂದಿಲ್ಲ ಎಂಬ ಉತ್ತರ ಬಂದಿದೆ. ಈ ವೇಳೆ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ 2022ರ ಆಗಸ್ಟ್ 10ರಂದು ಬಾಲಕ ಶಾಲೆಗೆ ಹೋಗುತ್ತಿರುವ ವೀಡಿಯೋ ಸೆರೆಯಾಗಿದೆ. ಆದರೆ ಆತ ಸ್ಕೂಲ್ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಪೊಲೀಸರು ಈ ವಿಚಾರವಾಗಿ ಕಳೆದ ನಾಲ್ಕು ವರ್ಷದಿಂದ ಬಾಲಕನ ಹುಡುಕಾಟ ನಡೆಸುತ್ತಿದ್ದು, ಈ ವೇಳೆ ಬೆಂಗಳೂರಿನಲ್ಲಿ ಕಿಶೋರ್ ಪತ್ತೆಯಾಗಿದ್ದಾನೆ.
