ಹುಬ್ಬಳ್ಳಿ: ಒಂದಡೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆದಾಯ ಕೊರತೆಯಿಂದ ಬಳಲುತ್ತಿದೆ. ಮತ್ತೊಂದಡೆ ಪಾಲಿಕೆಗೆ ಆದಾಯ ಬರುವ ಮೂಲಗಳಲ್ಲಿ ಅಕ್ರಮಗಳು ನಡೆದಿದ್ದರೂ ಪಾಲಿಕೆ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿಕೊಂಡಿದೆ. ಕಲಾವಿದರ ಕಾಲೋನಿಯಲ್ಲಿ ಭೂ ಮಾಫಿಯಾ ದಲ್ಲಾಳಿಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸೈಟ್ಗಳನ್ನು ಅಕ್ರಮವಾಗಿ ಪರಬಾರೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳಬೇಕಿದ್ದ ಪಾಲಿಕೆ ಮೌನಕ್ಕೆ ಶರಣಾಗಿದ್ದು, ಅಕ್ರಮದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಸಾಥ್ ನೀಡಿರುವ ಆರೋಪಗಳು ಕೇಳಿಬರುತ್ತಿವೆ.
ಘಟನೆ ಹಿನ್ನೆಲೆ
ಹುಬ್ಬಳ್ಳಿಯ ಆನಂದ ನಗರದಲ್ಲಿ ಕಲಾವಿದರು ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಜನರಿಗಾಗಿ 1980 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿವೇಶನಗಳನ್ನು ನೀಡಿತ್ತು. ಪಾಲಿಕೆಯ ಒಡೆತನದ ಆಸ್ತಿಯನ್ನು ನಿವೇಶನಗಳನ್ನಾಗಿ ಮಾಡಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಸರಿಸುಮಾರು ಮೂರುವರೆ ಸಾವಿರ ಫಲಾನುಭವಿಗಳಿಗೆ ಆ ಸಮಯದಲ್ಲಿ ಹಕ್ಕುಪತ್ರ ನೀಡಿತ್ತು. ಹಕ್ಕುಪತ್ರ ನೀಡುವ ಸಮಯದಲ್ಲಿ, 20 ವರ್ಷಗಳ ಕಾಲ ನಿವೇಶನಗಳನ್ನು ಮಾರಾಟ ಮಾಡಬಾರದು. ಆ ಬಳಿಕ ಮಾರಾಟ ಮಾಡಿದರೆ ನಿವೇಶನದ ಅಂದಿನ ಮಾರ್ಕೆಟ್ ಬೆಲೆಯ ಶೇಕಡ 25ರಿಂದ 50ರಷ್ಟು ಹಣವನ್ನು ಪಾಲಿಕೆಗೆ ಸಂದಾಯ ಮಾಡಬೇಕು. ಪಾಲಿಕೆಯಿಂದ ಮಾರಾಟ ಪರವಾನಗಿ ಪತ್ರವನ್ನು ಪಡೆದ ನಂತರವೇ ಮಾರಾಟ ಮಾಡಬೇಕು ಎಂಬ ನಿಯಮಗಳನ್ನು ವಿಧಿಸಲಾಗಿತ್ತು.
ಇನ್ನು ಈ ಮಾಫಿಯಾದಲ್ಲಿ ಕೆಲ ಜನಪ್ರತಿನಿಧಿಗಳು, ಪಾಲಿಕೆಯ ಅಧಿಕಾರಿಗಳು, ಲ್ಯಾಂಡ್ ಮಾಫಿಯಾದವರ ಕೈವಾಡವಿದೆಯಂತೆ. ಸದ್ಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆದಾಯದ ಕೊರತೆಯಿಂದ ಬಳಲುತ್ತಿದೆ. ಯಾವುದೇ ಕಾಮಗಾರಿ ಮಾಡಿ ಅಂತ ಹೇಳಿದರು ಕೂಡ ಪಾಲಿಕೆಯಲ್ಲಿ ಹಣವಿಲ್ಲ ಅಂತ ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಿವೇಶನಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೆ ಪಾಲಿಕೆಯ ಬೊಕ್ಕಸಕ್ಕೆ ಹೆಚ್ಚಿನ ಹಣವು ಹರಿದು ಬರುತ್ತದೆ. ಆದರೆ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಕೈಕಟ್ಟಿ ಕೂತಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.
