ಮಂಗಳೂರು: ಸುಲ್ತಾನ್ ಬತ್ತೇರಿ ಪ್ರದೇಶದಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ನದಿಯ ತೀರ ಭಾಗದಲ್ಲಿ ಮಣ್ಣು ತುಂಬಿಸಿ ಹೊಸ ಕಾಮಗಾರಿ ಆರಂಭಿಸಿರುವ ಕುರಿತು ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ. ನದಿಯ ಸ್ವಾಭಾವಿಕ ಹರಿವು ಮತ್ತು ಅಸ್ತಿತ್ವವನ್ನು ಕಾಪಾಡಬೇಕಾದ ಪ್ರದೇಶದಲ್ಲೇ ಭೂಭರ್ತಿ ಕಾಮಗಾರಿ ನಡೆಯುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ಕಳವಳ ಮೂಡಿಸಿದೆ.ಸ್ಥಳೀಯರ ಪ್ರಕಾರ, ನದಿ ತೀರದ ಪ್ರದೇಶಕ್ಕೆ ಮಣ್ಣು ಹಾಕಿ ಕಾಮಗಾರಿ ನಡೆಸುತ್ತಿರುವುದು ನದಿಯ ಮೂಲ ಸ್ವರೂಪದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಮ್ಮೆ ರಾಜಕಾಲುವೆಗಳು ಮತ್ತು ನೈಸರ್ಗಿಕ ಜಲಮಾರ್ಗಗಳು ಒತ್ತುವರಿ ಹಾಗೂ ನಿರ್ಲಕ್ಷ್ಯದಿಂದ ತಮ್ಮ ಮೂಲ ಸ್ವರೂಪ ಕಳೆದುಕೊಂಡಂತೆ, ಇದೇ ರೀತಿ ನದಿಗಳ ಮೇಲೂ ನಿರಂತರ ಒತ್ತಡ ಮುಂದುವರಿದರೆ ಭವಿಷ್ಯದಲ್ಲಿ ಮಂಗಳೂರಿನ ನದಿಗಳ ಅಸ್ತಿತ್ವವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.ನಗರದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಜಲಮಾರ್ಗಗಳು ಮತ್ತು ನದಿ ತೀರ ಪ್ರದೇಶಗಳ ಸಂರಕ್ಷಣೆಯ ಕುರಿತು ಪ್ರಶ್ನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಹೊಸ ಚರ್ಚೆಗೆ ಕಾರಣವಾಗಿದೆ. ನದಿ, ಕಾಲುವೆ ಹಾಗೂ ಜಲಮಾರ್ಗಗಳ ಸಂರಕ್ಷಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕಾಳಜಿ ವಹಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ.ಈ ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆಯೇ? ಈ ಒತ್ತುವರಿಯಲ್ಲಿ ಅಧಿಕಾರಿಗಳು ಶಮಿಲಾಗಿದ್ದಾರೆಯೇ? ನದಿ ತೀರ ಪ್ರದೇಶದಲ್ಲಿ ನಡೆಯುತ್ತಿರುವ ಭೂಭರ್ತಿ ಕಾಮಗಾರಿಯ ಕಾನೂನುಬದ್ಧತೆ ಏನು? ಎಂಬ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟನೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನದಿಗಳು ಕೇವಲ ನೀರಿನ ಹರಿವಿನ ಮಾರ್ಗಗಳಲ್ಲ; ಅವು ನಗರದ ಪರಿಸರ ಸಮತೋಲನದ ಭಾಗವಾಗಿವೆ. ಹೀಗಾಗಿ ನದಿ ತೀರ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ನದಿಗಳ ಅಸ್ತಿತ್ವ ಮತ್ತು ನೈಸರ್ಗಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
