ಅಲುವಾ: ಪ್ರಿಸ್ಕೂಲ್ ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಎರಡೂವರೆ ವರ್ಷದ ಬಾಲಕನೊಬ್ಬ ಜನನಿಬಿಡ ರಸ್ತೆಗೆ ನಡೆದುಕೊಂಡು ಬಂದು, ಮಿನಿ ಲಾರಿಯೊಂದರ ಅಡಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ನಾಟಕೀಯ ಘಟನೆ ಕೇರಳದ ಅಲುವಾ ಸಮೀಪದ ಎಡಯಪ್ಪುರಂನಲ್ಲಿ ನಡೆದಿದೆ. ಈ ಇಡೀ ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಕ್ಕಳ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ಇಲ್ಲಿನ ಸ್ಥಳೀಯ ಪ್ರಿಸ್ಕೂಲ್ ಒಂದರಲ್ಲಿ ಎಂದಿನಂತೆ ಮಗು ಇತ್ತು. ಆದರೆ ಶಾಲೆಯ ಆವರಣದಲ್ಲಿ ಪೇಂಟಿಂಗ್ (ಬಣ್ಣ ಬಳಿಯುವ) ಕೆಲಸ ನಡೆಯುತ್ತಿದ್ದ ಕಾರಣ ಮುಖ್ಯ ಗೇಟ್ ಅನ್ನು ತೆರೆದಿಡಲಾಗಿತ್ತು. ಇದನ್ನು ಗಮನಿಸದ ಸಿಬ್ಬಂದಿ ವರ್ಗದವರ ಬೇಜವಾಬ್ದಾರಿಯಿಂದಾಗಿ, ಎರಡೂವರೆ ವರ್ಷದ ಮಗು ಆಟವಾಡುತ್ತಾ ಸದ್ದಿಲ್ಲದೆ ಗೇಟ್ ದಾಟಿ ವಾಹನಗಳು ವೇಗವಾಗಿ ಚಲಿಸುವ ರಸ್ತೆಯ ಮಧ್ಯಭಾಗಕ್ಕೆ ಬಂದು ನಿಂತಿದೆ. ಮಗು ಶಾಲೆಯಿಂದ ಹೊರಹೋಗಿರುವುದು ಅಲ್ಲಿನ ಶಿಕ್ಷಕರಿಗಾಗಲಿ ಅಥವಾ ಭದ್ರತಾ ಸಿಬ್ಬಂದಿಗಾಗಲಿ ತಿಳಿದೇ ಇರಲಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಮಗು ರಸ್ತೆಯ ಮಧ್ಯೆ ನಿಂತಿರುವುದನ್ನು ಎದುರಿನಿಂದ ಬರುತ್ತಿದ್ದ ಮಿನಿ ಲಾರಿಯ ಚಾಲಕ ಸಕಾಲದಲ್ಲಿ ಗಮನಿಸಿ, ತಕ್ಷಣವೇ ಬ್ರೇಕ್ ಹಾಕಿ ವಾಹನವನ್ನು ನಿಲ್ಲಿಸಿದ್ದಾನೆ. ಲಾರಿ ನಿಲ್ಲುತ್ತಿದ್ದಂತೆ ಕೆಳಗಿಳಿದ ಚಾಲಕ ಓಡಿಹೋಗಿ ಮಗುವನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದರಿಂದ ಭೀಕರ ದುರಂತವೊಂದು ತಪ್ಪಿದಂತಾಗಿದೆ. ಈ ಘಟನೆ ನಡೆಯುವ ಕೆಲವೇ ದಿನಗಳ ಮುನ್ನ ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೋಟ್ಟಿ ಎಂಬಲ್ಲಿ ಮತ್ತೊಂದು ಇಂತಹದ್ದೇ ಘಟನೆ ನಡೆದಿತ್ತು. ಕೊಂಡೋಟ್ಟಿ-ಪುಲಿಕ್ಕಲ್ ರಸ್ತೆಯ ವಲಿಯಪರಂಬದಲ್ಲಿ ಹತ್ತಿರದ ಮನೆಯಿಂದ ತೆವಳುತ್ತಾ ರಸ್ತೆಯ ಮಧ್ಯಕ್ಕೆ ಬಂದಿದ್ದ ಕಂದಮ್ಮನನ್ನು ಆ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಚಾಲಕ ಸಮಯಪ್ರಜ್ಞೆಯಿಂದ ಬ್ರೇಕ್ ಹಾಕಿ ಬಚಾವ್ ಮಾಡಿದ್ದನು. ಬಸ್ ಕಂಡಕ್ಟರ್ ತಕ್ಷಣ ಓಡಿಹೋಗಿ ಮಗುವನ್ನು ರಕ್ಷಿಸಿದ್ದರು.ಬೆನ್ನುಬೆನ್ನಿಗೆ ನಡೆದಿರುವ ಈ ಎರಡೂ ಘಟನೆಗಳು ಪ್ರಿಸ್ಕೂಲ್ಗಳ ಜವಾಬ್ದಾರಿ, ಮಕ್ಕಳ ಸುರಕ್ಷತಾ ಚೌಕಟ್ಟು ಹಾಗೂ ಹೆತ್ತವರ ಜಾಗರೂಕತೆಯ ಕುರಿತು ದೇಶಾದ್ಯಂತ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
