ಬೆಂಗಳೂರಿನ ಕೆ.ಆರ್. ಪುರಂನಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯಲ್ಲಿ ತನಿಖೆಗೆ ಹೊಸ ತಿರುವು ಸಿಕ್ಕಿದ್ದು, ಹಲವು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.
ಇದುವರೆಗೆ ಆರೋಪಿಗಳಾದ ಕೆನೆತ್ ಹಾಗೂ ಶ್ವೇತಾ ಪ್ರೇಮಿಗಳು, ಲಿವಿಂಗ್ ಟುಗೆದರ್ನಲ್ಲಿದ್ದರು ಎಂದು ಭಾವಿಸಲಾಗಿತ್ತು. ಆದರೆ ಅಸಲಿಗೆ ಇವರಿಬ್ಬರ ನಡುವೆ ಯಾವುದೇ ಪ್ರೇಮ ಸಂಬಂಧವಾಗಲಿ, ದೈಹಿಕ ಸಂಬಂಧವಾಗಲಿ ಇರಲಿಲ್ಲ. ಇವರಿಬ್ಬರು ಕೇವಲ ಸ್ನೇಹಿತರಾಗಿದ್ದರು ಎಂಬ ಕಟು ಸತ್ಯ ಪೊಲೀಸರ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ.
ಆರೋಪಿ ಕೆನೆತ್ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಆದರೆ ಮನೆಯವರಿಗೆ ತಾನು ಹೈದರಾಬಾದ್ನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದ. ತನ್ನ ಐಷಾರಾಮಿ ಜೀವನ, ಪಾರ್ಟಿ ಹಾಗೂ ಸ್ನೇಹಿತರೊಂದಿಗೆ ಗೋವಾ, ಮುಂಬೈ ಪ್ರವಾಸ ಮಾಡಲು ಹಣದ ಅಗತ್ಯವಿತ್ತು. ಇದಕ್ಕಾಗಿ ಆತ ಶ್ವೇತಾಳನ್ನು ಬಳಸಿಕೊಂಡಿದ್ದ. ಶ್ವೇತಾ ತನ್ನ ಕಷ್ಟಗಳನ್ನು ಕೆನೆತ್ ಬಳಿ ಹೇಳಿಕೊಂಡಾಗ, ಆಕೆಗೆ ಸಹಾಯ ಮಾಡುವ ನೆಪದಲ್ಲಿ ಆಕೆಯ ನಂಬಿಕೆಯನ್ನು ಗಳಿಸಿದ್ದ. ಶ್ವೇತಾ ತನ್ನ ಹೆತ್ತವರಿಗಿಂತ ಹೆಚ್ಚಾಗಿ ಕೆನೆತ್ ನನ್ನು ನಂಬಿದ್ದಳು. ಈ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಕೆನೆತ್ ಆಕೆಯಿಂದ ಹಂತ ಹಂತವಾಗಿ ಸುಮಾರು 50ಲಕ್ಷ ರೂಪಾಯಿಗಳಷ್ಟು ಭಾರಿ ಮೊತ್ತದ ಹಣವನ್ನು ದೋಚಿದ್ದ. ಅಷ್ಟೇ ಅಲ್ಲದೆ ಸ್ನೇಹಿತೆಗೆ ಹಣ ಕೊಡಿಸುವ ವಿಚಾರಕ್ಕಾಗಿ ತನ್ನದೇ ಮನೆಯಲ್ಲೂ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದ ಎನ್ನಲಾಗಿದೆ.
ಕೆನೆತ್ ಗೆ ಇತ್ತು ಮತ್ತೊಬ್ಬ ಪ್ರೇಯಸಿ:
ಕೆನೆತ್ ಕೆ.ಆರ್. ಪುರಂ ಹಾಗೂ ಎಚ್ಎಎಲ್ ನಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ಪಡೆದಿದ್ದ. ಈ ಎರಡು ಮನೆಗಳ ರಹಸ್ಯವನ್ನು ಭೇದಿಸಿದಾಗ ಪೊಲೀಸರಿಗೆ ಅಸಲಿ ವಿಚಾರ ತಿಳಿದಿದೆ. ಕೆನೆತ್ಗೆ ಶ್ವೇತಾ ಅಲ್ಲದೆ ಬೇರೊಬ್ಬ ಪ್ರೇಯಸಿ ಇದ್ದಳು. “ನೀನು ಸದಾ ಶ್ವೇತಾ ಜೊತೆಗೇ ಇರುತ್ತೀಯಾ” ಎಂದು ಆಕೆ ಗಲಾಟೆ ಮಾಡುತ್ತಿದ್ದ ಕಾರಣ ಕೆನೆತ್ ಎಚ್ಎಎಲ್ನಲ್ಲಿ ಮತ್ತೊಂದು ಮನೆ ಮಾಡಿದ್ದ. ಶ್ವೇತಾಗೆ ಕೇವಲ ಸಹಾಯ ಮಾಡುತ್ತಿದ್ದೇನೆ, ಸಮಸ್ಯೆ ಮುಗಿದ ಬಳಿಕ ಆಕೆ ಹೊರಟುಹೋಗುತ್ತಾಳೆ ಎಂದು ತನ್ನ ಪ್ರೇಯಸಿಯನ್ನು ನಂಬಿಸಿದ್ದ. ತಾನು ಶ್ವೇತಾಳಿಂದ ಪಡೆದ ಹಣದಲ್ಲೇ ಪ್ರತಿ ತಿಂಗಳು 30 ರಿಂದ 70 ಸಾವಿರ ರೂಪಾಯಿವರೆಗೆ ತನ್ನ ಸಂಬಳದ ಹಣ ಎಂದು ತನ್ನ ಮನೆಗೆ ಕಳುಹಿಸುತ್ತಿದ್ದ.
ಹೆತ್ತವರ ಕೊಲೆಗೆ ಪ್ರಚೋದನೆ:
ಶ್ವೇತಾ ಬ್ಯಾಂಕ್ನಿಂದ ಪಡೆದಿದ್ದ 30 ಲಕ್ಷ ರೂಪಾಯಿ ಸಾಲದ ಇಎಂಐಗೆ ಸಂಬಂಧಿಸಿದಂತೆ ಬ್ಯಾಂಕ್ನಿಂದ ನೋಟಿಸ್ ಬರಲಾರಂಭಿಸಿತ್ತು. ಹೀಗಾಗಿ ಆಕೆಯ ತಾಯಿ ಹಾಗೂ ಕುಟುಂಬದವರು ಹಣ ವಾಪಸ್ ನೀಡುವಂತೆ ಶ್ವೇತಾಗೆ ತೀವ್ರ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಆತಂಕಗೊಂಡ ಶ್ವೇತಾ ತನ್ನ ಕಷ್ಟವನ್ನು ಕೆನೆತ್ ಮುಂದೆ ತೋಡಿಕೊಂಡಿದ್ದಾಳೆ. ಹಣ ವಾಪಸ್ ಕೇಳುತ್ತಿದ್ದಂತೆ ಕೆರಳಿದ ಕೆನೆತ್, ಈ ಎಲ್ಲಾ ಕಿರಿಕಿರಿ ಮತ್ತು ತೊಂದರೆಯಿಂದ ಮುಕ್ತಿ ಪಡೆಯಬೇಕಾದರೆ ಹೆತ್ತವರನ್ನು ಕೊಲೆ ಮಾಡುವುದೊಂದೇ ದಾರಿ ಎಂದು ಕಳೆದ ಆರು ತಿಂಗಳಿನಿಂದ ಶ್ವೇತಾಳ ಬ್ರೈನ್ ವಾಶ್ ಮಾಡಿದ್ದ. ಕೊನೆಗೆ ಕೆನೆತ್ ಮಾತಿಗೆ ಮರುಳಾದ ಶ್ವೇತಾ, ತನ್ನದೇ ತಂದೆ, ತಾಯಿ ಹಾಗೂ ತಂಗಿಯ ಕೊಲೆಗೆ ಕೆನೆತ್ ಗೆ ಸಾತ್ ನೀಡಿದ್ದಾಳೆ ಎನ್ನಲಾಗಿದೆ.
ಇನ್ನೊಂದು ದುರಂತದ ವಿಷಯವೆಂದರೆ, ಆರೋಪಿ ಕೆನೆತ್ ಶ್ವೇತಾಳ ತಂದೆಯೊಂದಿಗೂ ಸಂಪರ್ಕದಲ್ಲಿದ್ದ. ಶ್ವೇತಾಳ ನಡತೆ ಸರಿ ಇಲ್ಲ ಎಂದು ಆಕೆಯ ತಂದೆಗೆ ದೂರು ನೀಡುತ್ತಾ, ತಾನು ಒಳ್ಳೆಯವನೆಂದು ಬಿಂಬಿಸಿಕೊಳ್ಳುವ ನಾಟಕ ಆಡುತ್ತಿದ್ದ. ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
