ಮಂಗಳೂರು: EKYC ಮಾಡಿಸಿಕೊಳ್ಳಲು ಸರ್ವರ್ ಸಮಸ್ಯೆಯಿಂದಾಗಿ ಮಕ್ಕಳು ಹಾಗೂ 70 ವರ್ಷದ ವೃದ್ಧರು ಸೇರಿದಂತೆ ಸಾರ್ವಜನಿಕರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಣ್ಣ eKYC ಪ್ರಕ್ರಿಯೆಗಾಗಿ ದಿನವಿಡೀ ಸರ್ವರ್ ಡೌನ್ ಆಗಿರುವುದರಿಂದ ಸಾರ್ವಜನಿಕರು ಸರದಿಯಲ್ಲಿ ನಿಂತು ಕಾಯಬೇಕಾಗಿದೆ. ಅದರಲ್ಲೂ ಮಕ್ಕಳು ಶಾಲೆಗೆ ತೆರಳಬೇಕಾದ ಸಮಯದಲ್ಲಿ eKYCಗಾಗಿ ಸಾಲಿನಲ್ಲಿ ನಿಲ್ಲುವಂತಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಒಂದು ದಿನ ಶಾಲೆ ತಪ್ಪಿದರೆ ಮಗುವಿನ ಒಂದು ದಿನದ ಕಲಿಕೆಗೆ ತೊಂದರೆಯಾಗುತ್ತದೆ. ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಮುಂದಿಟ್ಟಿದ್ದಾರೆ.
ಇನ್ನು 70 ವರ್ಷದ ವೃದ್ಧರು ಕೂಡ ಬೆಳಗ್ಗೆಯಿಂದ ನೀರು ಹಾಗೂ ಊಟವಿಲ್ಲದೆ ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ. ಅವರು ಭಿಕ್ಷೆ ಬೇಡಲು ಬಂದಿಲ್ಲ, ತಮ್ಮ ಹಕ್ಕಿನ ಅಕ್ಕಿಗಾಗಿ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸರ್ವರ್ ಸಮಸ್ಯೆ ಇರುವಾಗ eKYCಗೆ ಗಡುವು ವಿಧಿಸಿರುವುದಕ್ಕೂ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಸೌಲಭ್ಯ ಕಲ್ಪಿಸಲು ಸಾಧ್ಯವಾಗದ ಸಂದರ್ಭದಲ್ಲಿ ಗಡುವು ವಿಧಿಸಿ ಜನರನ್ನು ಆತಂಕಕ್ಕೆ ಒಳಪಡಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಲಾಗಿದೆ.
AC ಕಚೇರಿಯಲ್ಲಿ ಕುಳಿತು ಗಡುವು ವಿಸ್ತರಿಸಲಾಗಿದೆ ಎಂದು ಹೇಳುವುದು ಸುಲಭ. ಆದರೆ ಸಾರ್ವಜನಿಕರು ಬಿಸಿಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅರಿತುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ತಕ್ಷಣ eKYC ಗಡುವನ್ನು ಒಂದು ತಿಂಗಳು ವಿಸ್ತರಿಸಿ ಲಿಖಿತ ಆದೇಶ ನೀಡಬೇಕು. ಪ್ರತಿ ಕೇಂದ್ರದಲ್ಲಿ ಮಕ್ಕಳು ಹಾಗೂ ವೃದ್ಧರಿಗೆ ಪ್ರತ್ಯೇಕ ಟೋಕನ್ ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು. ಅಲ್ಲದೆ, ಪ್ರತಿ ಪಂಚಾಯಿತಿಗೆ ಮೊಬೈಲ್ eKYC ಯಂತ್ರ ಕಳುಹಿಸಿ ಜನರು ಅಲೆದಾಡುವುದನ್ನು ತಪ್ಪಿಸಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ.
ಸರ್ವರ್ ಸಮಸ್ಯೆ ಆಡಳಿತದ ಸಮಸ್ಯೆಯಾಗಿದ್ದು, ಅದಕ್ಕಾಗಿ ಜನರನ್ನು ಶಿಕ್ಷಿಸಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ಎರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಇದೇ ವಿಡಿಯೋದೊಂದಿಗೆ ಲೋಕಾಯುಕ್ತರಿಗೆ ಹಾಗೂ ಮಾಧ್ಯಮಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ.















