ಬಿಜ್ನೋರ್ ಲವ್ ಜಿಹಾದ್’ ಅನ್ನು ಉತ್ತೇಜಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಪುರುಷೋತ್ತಮಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ನೌಶಾದ್ ಅಹ್ಮದ್ (43) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಗೌರವ್ ಚೌಧರಿ (32) ಪೊಲೀಸರಿಗೆ ಶರಣಾಗಿದ್ದು, ಕೃತ್ಯಕ್ಕೆ ಬಳಸಿದ್ದ ಬಂದೂಕನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ನೌಶಾದ್ ಅಹ್ಮದ್ ಮೇಲೆ ದಾಳಿ ನಡೆದಿದೆ. ರಸ್ತೆಯಲ್ಲಿ ಕಾದು ನಿಂತಿದ್ದ ಆರೋಪಿ, ನೌಶಾದ್ ಬಂದ ಕೂಡಲೇ ಗುಂಡು ಹಾರಿಸಿ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನೌಶಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ಗೌರವ್ ಚೌಧರಿ ಮತ್ತು ನೌಶಾದ್ ಅಹ್ಮದ್ ನಡುವೆ ಈ ಹಿಂದೆ ಜಗಳ ನಡೆದಿತ್ತು. ಪ್ರದೇಶದ ದಲಿತ ಕುಟುಂಬವೊಂದರ ಯುವತಿ ಸ್ಥಳೀಯ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದ ವಿಚಾರದಲ್ಲಿ ಗೌರವ್ ಎರಡೂ ಕುಟುಂಬಗಳಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಬಳಿಕ ಯುವಕ-ಯುವತಿಗೆ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರು.
ಈ ವಿಚಾರವನ್ನು ಯುವಕರು ನೌಶಾದ್ ಅಹ್ಮದ್ ಅವರ ಗಮನಕ್ಕೆ ತಂದಿದ್ದರು. ಕೊಲೆಗೆ ನಾಲ್ಕು ದಿನಗಳ ಮೊದಲು ಮಾರುಕಟ್ಟೆಯಲ್ಲಿ ನೌಶಾದ್ ಅವರು ಗೌರವ್ನನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಘಟನೆಯ ಮೇಲಿನ ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣವಾಗಿರಬಹುದು ಎಂಬುದು ಪೊಲೀಸರ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಹತ್ಯೆಗೆ ‘ಲವ್ ಜಿಹಾದ್’ ಆರೋಪವನ್ನು ನೆಪವಾಗಿ ಬಳಸಲಾಗಿದೆಯೇ ಅಥವಾ ಅದರ ಹಿಂದೆ ಬೇರೆ ಯಾವುದೇ ಉದ್ದೇಶವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.















