ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಮಾಜಿ ಸೇನಾ ಮುಖ್ಯಸ್ಥ ಜ.ನರವಣೆ ಅವರ ಅಪ್ರಕಟಿತ ಕೃತಿಯ ಪ್ರಸಾರಕ್ಕಾಗಿ ದಿಲ್ಲಿ ಪೋಲಿಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಸೋಮವಾರ ಅಧಿಕೃತ ಹೇಳಿಕೆಯು ತಿಳಿಸಿದೆ.
‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕೃತಿಯ ಮುದ್ರಣ ಪೂರ್ವ ಪ್ರತಿಯನ್ನು ಸಕ್ಷಮ ಅಧಿಕಾರಿಗಳಿಂದ ಕಡ್ಡಾಯ ಅನುಮತಿಯನ್ನು ಪಡೆಯದೆ ಪ್ರಸಾರ ಮಾಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳು ಮತ್ತು ಆನ್ಲೈನ್ ಸುದ್ದಿ ವೇದಿಕೆಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ದಿಲ್ಲಿ ಪೋಲಿಸರು ಗಮನಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೊಲೀಸ್ ಹೇಳಿಕೆಯ ಪ್ರಕಾರ,ಕೃತಿಯ ಪ್ರಕಟಣೆಗೆ ಅಗತ್ಯವಾದ ಅನುಮತಿಯನ್ನು ಸಂಬಂಧಿತ ಅಧಿಕಾರಿಗಳಿಂದ ಈವರೆಗೂ ಸ್ವೀಕರಿಸಲಾಗಿಲ್ಲ ಎಂದು ವರದಿಯಾಗಿದೆ.
ಪರಿಶೀಲನೆಯ ಬಳಿಕ, ಅದೇ ಶೀರ್ಷಿಕೆಯೊಂದಿಗೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಪ್ರೈ.ಲಿ.ಸಿದ್ಧಪಡಿಸಿರುವ ಟೈಪ್-ಸೆಟ್ ಕೃತಿಯ ಪಿಡಿಎಫ್ ಪ್ರತಿಯು ಕೆಲವು ವೆಬ್ಸೈಟ್ಗಳಲ್ಲಿ ಲಭ್ಯವಿರುವುದು ಕಂಡು ಬಂದಿದೆ. ಕೆಲವು ಆನ್ಲೈನ್ ಮಾರಾಟ ತಾಣಗಳೂ ಕೃತಿಯು ಖರೀದಿಗೆ ಲಭ್ಯವಿದೆ ಎಂಬಂತೆ ಪೂರ್ಣಗೊಂಡ ಪುಸ್ತಕದ ಮುಖಪುಟವನ್ನು ಪ್ರದರ್ಶಿಸಿವೆ ಎಂದು ಹೇಳಿಕೆಯು ತಿಳಿಸಿದೆ.
ದಿಲ್ಲಿ ಪೊಲೀಸರ ವಿಶೇಷ ಘಟಕವು ಪ್ರಕರಣವನ್ನು ದಾಖಲಿಸಿಕೊಂಡಿದ್ದು.ಇನ್ನೂ ಅನುಮೋದನೆ ಪಡೆದಿರದ ಅಪ್ರಕಟಿತ ಕೃತಿಯ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ತನಿಖೆಯನ್ನು ನಡೆಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಈ ಕೃತಿಯ ಪ್ರತಿಯನ್ನು ಪ್ರದರ್ಶಿಸಿದ್ದರು. ಇದು ಸದನದಲ್ಲಿ ತೀವ್ರ ಕಾವೇರಿಸಿದ್ದು,ಕಲಾಪಗಳಿಗೆ ವ್ಯತ್ಯಯಗಳನ್ನುಂಟು ಮಾಡಿತ್ತು. ಎಂಟು ಪ್ರತಿಪಕ್ಷ ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತನ್ನೂ ಮಾಡಲಾಗಿದೆ.
‘ಮೂರ್ನಾಲ್ಕು ಸಲ ನನಗೆ ಮಾತನಾಡಲು ಅವರು ಅವಕಾಶ ನೀಡಲಿಲ್ಲ. ಕೃತಿಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಅವರು ಮೊದಲು ಹೇಳಿದ್ದರು. ನಾನು ಕೃತಿಯನ್ನಲ್ಲಮ್ಯಾಗಝಿನ್ ಉಲ್ಲೇಖಿಸುತ್ತಿದ್ದೇನೆ ಎಂದು ತಿಳಿಸಿದ್ದೆ. ಆಗ ಅವರು ಮ್ಯಾಗಝಿನ್ ಅನ್ನೂ ಉಲ್ಲೇಖಿಸುವಂತಿಲ್ಲ ‘ಎಂದು ಹೇಳಿದ್ದರು ಎಂದು ರಾಹುಲ್ ತಿಳಿಸಿದರು.
‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪುಸ್ತಕವು ಪ್ರಕಟಗೊಂಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಪುಸ್ತಕವು ಪ್ರಕಟಗೊಂಡಿದೆ ಮತ್ತು ನಮ್ಮ ಬಳಿ ಅದರ ಪ್ರತಿಯಿದೆ’ ಎಂದು ಹೇಳಿದ ರಾಹುಲ್,ಅದು ವಿದೇಶಗಳಲ್ಲಿ ಲಭ್ಯವಿದೆ,ಆದರೆ ಭಾರತದಲ್ಲಿ ಪ್ರಕಟಿಸಲು ಅನುಮತಿಸಲಾಗಿಲ್ಲ ಎಂದು ತಿಳಿಸಿದರು.
