ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಮೂವರು ಪ್ರಮುಖ ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಸೇರಿದಂತೆ ಒಟ್ಟು 14ಕ್ಕೂ ಹೆಚ್ಚು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ (SP) ಎಂ. ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ 12 ಪ್ರತ್ಯೇಕ ತಂಡಗಳು ಈ ಮಹತ್ವದ ರೇಡ್ ಕೈಗೊಂಡಿವೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ದಾಖಲೆಗಳು ಹಾಗೂ ನಗದು ಪತ್ತೆಯಾಗಿದೆ.
ದಾಳಿಗೊಳಗಾದ ಅಧಿಕಾರಿಗಳ ವಿವರ:
ಸಿದ್ದೇಶ್ವರ ಹೆಬ್ಬಾಳ್ (ಮುಖ್ಯ ತಾಂತ್ರಿಕ ಅಧಿಕಾರಿ, NWKRTC ಹುಬ್ಬಳ್ಳಿ ವಿಭಾಗ):
ಇವರಿಗೆ ಸೇರಿದ ದಾವಣಗೆರೆಯ ಆಂಜನೇಯ ಬಡಾವಣೆಯ ನಿವಾಸ, ಹುಬ್ಬಳ್ಳಿಯ ಕಚೇರಿ ಸೇರಿದಂತೆ 4 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಳಿಯ ವೇಳೆ ಇವರ ಮನೆಯಲ್ಲೇ ಬರೋಬ್ಬರಿ 40 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೃಷ್ಣ ನಾಯ್ಕ (ಕಾರ್ಯದರ್ಶಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ):
ದಾವಣಗೆರೆಯ ಎಸ್.ಎಸ್. ಬಡಾವಣೆಯಲ್ಲಿರುವ ಇವರ ನಿವಾಸ ಹಾಗೂ ಚಿತ್ರದುರ್ಗದ ಕಚೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತರು ತೀವ್ರ ಶೋಧ ನಡೆಸುತ್ತಿದ್ದಾರೆ.
ಸಣ್ಣ ಕೆಂಚಪ್ಪ (ಅಧೀಕ್ಷಕ ಎಂಜಿನಿಯರ್, ಕೆಆರ್ಐಡಿಎಲ್ ಬೆಳಗಾವಿ):
ಇವರಿಗೆ ಸಂಬಂಧಿಸಿದ ದಾವಣಗೆರೆಯ ಮನೆ ಹಾಗೂ ಬೆಳಗಾವಿಯ ನಿವಾಸ, ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾ ತಂಡಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿವೆ.
ಲೋಕಾಯುಕ್ತ ಮೂಲಗಳ ಪ್ರಕಾರ, ದಾಳಿ ಇನ್ನೂ ಮುಂದುವರಿದಿದ್ದು, ಅಧಿಕಾರಿಗಳು ಗಳಿಸಿರುವ ಒಟ್ಟು ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯಮಾಪನ ಮಾಡಲಾಗುತ್ತಿದೆ. ಭಾರಿ ಪ್ರಮಾಣದ ಆಸ್ತಿ ಪತ್ರಗಳು ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
