ಬೆಂಗಳೂರು : ರಾಜಧಾನಿಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷದ ಮುಗ್ಧ ಹೆಣ್ಣು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ತಿರುವು ಸಿಕ್ಕಿದೆ. ತನ್ನ ಖಾಸಗಿ ಜೀವನಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಮಗಳನ್ನೇ ಕೊಲೆ ಮಾಡಿರುವ ಆರೋಪದ ಮೇಲೆ 39 ವರ್ಷದ ಮಹಿಳೆ ಹಾಗೂ ಆಕೆಯ ಲಿವ್-ಇನ್ ಸಂಗಾತಿಯ ವಿರುದ್ಧ ಪೊಲೀಸರು ಶನಿವಾರ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.ವೆನ್ನೆಲಾ (5) ಕೊಲೆಯಾದ ದುರ್ದೈವಿ ಬಾಲಕಿ. ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಆತನ ಪರಿತ್ಯಕ್ತ ಪತ್ನಿ ಪ್ರಿಯಾಂಕಾ ಮತ್ತು ಆಕೆಯ ಲಿವ್-ಇನ್ ಪ್ರಿಯಕರ ಮೋಹನ್ ಜಿ ಎಂಬುವರ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103 (ಕೊಲೆ), 238 (ಸಾಕ್ಷ್ಯ ನಾಶ) ಹಾಗೂ 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಪ್ರಮುಖ ಆರೋಪಿ ಮೋಹನ್ನನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಎಫ್ಐಆರ್ (FIR) ಪ್ರಕಾರ, ದೂರುದಾರ ತಂದೆಗೆ 2007 ರಲ್ಲಿ ಪ್ರಿಯಾಂಕಾ ಅವರೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ನಡುವೆ 2025 ರಲ್ಲಿ ಪ್ರಿಯಾಂಕಾ ತನ್ನ ಹಳೆಯ ಸ್ನೇಹಿತ ಮೋಹನ್ ಜೊತೆ ಮತ್ತೆ ಸಂಪರ್ಕ ಸಾಧಿಸಿ, ಆತನೊಂದಿಗೆ ಅಕ್ರಮ ಸಂಬಂಧ ಆರಂಭಿಸಿದ್ದಾಳೆ. ಗಂಡನಿಗೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿ, ಕಿರಿಯ ಮಗಳು ವೆನ್ನೆಲಾಳನ್ನು ಕರೆದುಕೊಂಡು ಮೋಹನ್ ಜೊತೆ ಲಿವ್-ಇನ್ ವಾಸ ಮಾಡಲು ಆರಂಭಿಸಿದ್ದಳು. ಹಿರಿಯ ಮಗಳು ತಂದೆಯ ಜೊತೆಯಲ್ಲೇ ಉಳಿದುಕೊಂಡಿದ್ದಳು.ಈ ವರ್ಷದ ಮಾರ್ಚ್ 25 ರಂದು ಕಿರಿಯ ಮಗಳು ವೆನ್ನೆಲಾಳನ್ನು ಕರೆದುಕೊಂಡು ಮೋಹನ್ ಜೊತೆ ಲಿವ್-ಇನ್ ವಾಸ ಮಾಡಲು ಆರಂಭಿಸಿದ್ದಳು. ಹಿರಿಯ ಮಗಳು ತಂದೆಯ ಜೊತೆಯಲ್ಲೇ ಉಳಿದುಕೊಂಡಿದ್ದಳು.ಈ ವರ್ಷದ ಮಾರ್ಚ್ 25 ರಂದು ಕಿರಿಯ ಮಗಳು ವೆನ್ನೆಲಾ ಶವವಾಗಿ ಪತ್ತೆಯಾಗಿದ್ದಳು. ಮಗುವಿನ ಸಾವಿನ ಬಗ್ಗೆ ತಾಯಿ ಪ್ರಿಯಾಂಕಾ ನೀಡಿದ ವ್ಯತಿರಿಕ್ತ ಹೇಳಿಕೆಗಳು ತಂದೆಯ ಅನುಮಾನಕ್ಕೆ ಕಾರಣವಾಗಿತ್ತು. ಮಾರ್ಚ್ 24 ರ ರಾತ್ರಿ ಮಗು ಬಿರಿಯಾನಿ ತಿಂದಿತ್ತು, ಮರುದಿನ ಬೆಳಗ್ಗೆ ಮೃತಪಟ್ಟಿದೆ ಎಂದು ಪ್ರಿಯಾಂಕಾ ಮೊದಲು ಕಥೆ ಕಟ್ಟಿದ್ದಳು. ಆದರೆ ನಂತರ ಮಾತು ಬದಲಿಸಿ, ತಾನು ಮತ್ತು ಮೋಹನ್ ಕೋಲಾರದ ಕೆಫೆಯೊಂದರಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾಗ ಮಗುವನ್ನು ಹವಾನಿಯಂತ್ರಿತ (AC) ಕಾರಿನಲ್ಲಿ ಮಲಗಿಸಲಾಗಿತ್ತು, ಮರುದಿನ ಬೆಳಗ್ಗೆ ಮಗು ಮೃತಪಟ್ಟಿತ್ತು ಎಂದು ಮತ್ತೊಂದು ಹೇಳಿಕೆ ನೀಡಿದ್ದಳು.ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಂದೆಯ ಅನುಮಾನ ಬಲವಾಗಿದೆ. ಈ ವರದಿಯನ್ನು ಅವರು ಇಂಗ್ಲೆಂಡ್ನಲ್ಲಿ ಮಕ್ಕಳ ತಜ್ಞೆಯಾಗಿರುವ ತಮ್ಮ ಸಹೋದರಿಯೊಂದಿಗೆ ಹಂಚಿಕೊಂಡಾಗ, ಮಗುವಿನ ಸಾವು ಸ್ವಾಭಾವಿಕವಲ್ಲ, ಇದು ಕೊಲೆ ಎಂಬುದು ಖಾತರಿಯಾಗಿದೆ. ಆರೋಪಿಗಳು ತಮ್ಮ ಅಕ್ರಮ ಸಂಬಂಧ ಹಾಗೂ ಖಾಸಗಿ ಜೀವನಕ್ಕೆ ಮಗು ಅಡ್ಡಿಯಾಗಿದ್ದಾಳೆಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ತಂದೆ ದೂರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸದ್ಯ ತನಿಖೆ ಚುರುಕುಗೊಂಡಿದೆ.
