ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್ಲೈನ್ ಡೆಲಿವರಿ ಸಂಸ್ಥೆಯೊಂದರ ಸನ್ ರಾಯಲ್ ರೆಸಿಡೆನ್ಸಿ ಕಟ್ಟಡದಲ್ಲಿ ಲಿಫ್ಟ್ನಲ್ಲಿ ಸಿಲುಕಿ ನೌಫಲ್ ಎಂಬಾತ ಸಾವನ್ನಪ್ಪಿದ ದುರ್ಘಟನೆ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಘಟನೆ ಬಳಿಕ ಕಟ್ಟಡದ ಸುರಕ್ಷತೆ, ಲಿಫ್ಟ್ನ ಮಾನದಂಡಗಳು ಹಾಗೂ ಮಹಾನಗರ ಪಾಲಿಕೆಯ ಮೇಲ್ವಿಚಾರಣೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ವಾಣಿಜ್ಯ ಕಟ್ಟಡದ ಹೊರಭಾಗದಲ್ಲಿ ಅನಧಿಕೃತ ಜಾಕ್( Hoist), ಅಂದರೆ ಕಬ್ಬಿಣದ ಸಪೋರ್ಟ್ಗಳು ಮತ್ತು ಲೋಹದ ಶೀಟ್ಗಳನ್ನು ಬಳಸಿ ಕಟ್ಟಡದ ಕಾಮಗಾರಿ ವೇಳೆ ಕಲ್ಲು, ಸಿಮೆಂಟ್ ಕಾಂಕ್ರೀಟ್ ಹೀಗೆ ಸಲಕರಣೆಗಳನ್ನು ಒಯ್ಯುಲು ತಾತ್ಕಾಲಿಕವಾಗಿ ನಿರ್ಮಿಸಿರುತ್ತಾರೆ. ಅದನ್ನೆ ಈ ಡೆಲಿವರಿ ಸಂಸ್ಥೆಯ ಮಾಲಿಕರು ಅನಾಧಿಕೃತವಾಗಿ ಲಿಫ್ಟ್ ಗಳಾಗಿ ಪರಿವರ್ತಿಸಿದ್ದಾರೆ. ಈ ಲಿಫ್ಟ್ಗೆ ಅಗತ್ಯ ಸುರಕ್ಷತಾ ಪರಿಶೀಲನೆ ನಡೆದಿತ್ತೇ? ಸಂಬಂಧಿತ ಇಲಾಖೆಗಳ ಅನುಮೋದನೆ ಇದೆಯೇ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.
ಸ್ಥಳೀಯರ ಆರೋಪದಂತೆ, ಈ ಕಟ್ಟಡ ಮತ್ತು ಅಂಗಡಿಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾಣಿಜ್ಯ ಬಳಕೆಗೆ ಸಂಬಂಧಿಸಿದ ದಾಖಲೆಗಳ ಮೇಲೂ ಅನುಮಾನ ವ್ಯಕ್ತವಾಗಿದೆ. ಇದರ ಜೊತೆಗೆ, ಇದೇ ಕಟ್ಟಡ ಮಾಲೀಕರು ಮತ್ತೊಂದು ಪಾರ್ಟ್ನರ್ಶಿಪ್ನಲ್ಲಿ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ ಸಮೀಪ ಮತ್ತೊಂದು ಕಟ್ಟಡ ಅನಧಿಕೃತವಾಗಿ ಕಟ್ಟಿದ್ದಾರೆ.
ದುರ್ಘಟನೆಯ ನಂತರ ಕಟ್ಟಡ ಮಾಲೀಕರು ಈ ಪ್ರಕರಣಕ್ಕೆ ತಮ್ಮ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವವರಿಗೆ ಮಂಗಳೂರು ಮಹಾನಗರ ಪಾಲಿಕೆ ಅನಧಿಕೃತವಾಗಿ ಕಟ್ಟಡ ನಡೆಸಲು ಅವಕಾಶ ಹೇಗೆ ನೀಡಿದೆ? ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. “ಸುರಕ್ಷತಾ ನಿಯಮ ಉಲ್ಲಂಘನೆಯಾಗಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ?” ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಯಾವುದೇ ವಾಣಿಜ್ಯ ಕಟ್ಟಡದಲ್ಲಿ ಲಿಫ್ಟ್ ಅಳವಡಿಸುವ ಮೊದಲು ಸುರಕ್ಷತಾ ಪ್ರಮಾಣಪತ್ರ, ತಾಂತ್ರಿಕ ಪರಿಶೀಲನೆ ಹಾಗೂ ಸ್ಥಳೀಯ ಸಂಸ್ಥೆಗಳ ಅನುಮೋದನೆ ಕಡ್ಡಾಯವಾಗಿರುತ್ತದೆ. National Building Code (NBC), ಅಗ್ನಿ ಸುರಕ್ಷತಾ ನಿಯಮಗಳು ಹಾಗೂ ಮಹಾನಗರ ಪಾಲಿಕೆಯ ಕಟ್ಟಡ ನಿಯಮಗಳನ್ನು ಪಾಲಿಸಬೇಕು.
ಈ ಪ್ರಕರಣದಲ್ಲಿ ಕಟ್ಟಡ ಮಾಲೀಕರು, ಸಂಬಂಧಿತ ಕಂಪನಿ ಹಾಗೂ ಅನುಮತಿ ನೀಡಿದ ಅಧಿಕಾರಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೃತ ನೌಫಲ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯ ಕೇಳಿಬಂದಿದೆ.
