ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಉತ್ತರ ಕರ್ನಾಟಕದ ನಿರುದ್ಯೋಗಿ ಯುವಕರನ್ನು ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಅಪ್ಪ ಮತ್ತು ಮಗಳನ್ನು ಬೆಂಗಳೂರಿನ ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಶಂಶಾದ್ ಬೇಗಂ ಹಾಗೂ ಆಕೆಯ ತಂದೆ ಮನ್ಸೂರ್ ಅಹಮದ್ ಎಂದು ಗುರುತಿಸಲಾಗಿದೆ. ಈ ಅಪ್ಪ-ಮಗಳ ಜೋಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 5 ಕೋಟಿ 30 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.ಈ ಕಿರಾತಕರು ಹೆಚ್ಚಾಗಿ ಉತ್ತರ ಕರ್ನಾಟಕದ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡಿದ್ದರು. ತಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ನಂಬಿಸುತ್ತಿದ್ದರು. ರೈಲ್ವೆ, ಆದಾಯ ತೆರಿಗೆ (Income Tax), ಸಮಾಜ ಕಲ್ಯಾಣ ಇಲಾಖೆ, ನೀರಾವರಿ ಹಾಗೂ ಆರೋಗ್ಯ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೊಡಿಸುವುದಾಗಿ ಹಣ ಪೀಕುತ್ತಿದ್ದರು.ನಕಲಿ ತರಬೇತಿ ಕೇಂದ್ರ ಸೃಷ್ಟಿ!ವಂಚನೆಯ ಪರಾಕಾಷ್ಠೆ ಎಂದರೆ, ಇವರು ಕೇವಲ ಹಣ ಪಡೆದು ಸುಮ್ಮನಾಗುತ್ತಿರಲಿಲ್ಲ. ಬದಲಾಗಿ ನಂಬಿಕೆ ಹುಟ್ಟಿಸಲು. ಬೆಂಗಳೂರು, ಕೋಲ್ಕತ್ತಾ ಮತ್ತು ಮುಂಬೈನಂತಹ ನಗರಗಳಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸೃಷ್ಟಿಸಿದ್ದರು. ಅಲ್ಲಿ ಯುವಕರಿಗೆ 4 ತಿಂಗಳ ಕಾಲ ನಕಲಿ ತರಬೇತಿ ನೀಡುತ್ತಿದ್ದರು. ತರಬೇತಿ ಮುಗಿದ ನಂತರ ಅಧಿಕೃತವಾಗಿ ಕಾಣುವ ನಕಲಿ ನೇಮಕಾತಿ ಪತ್ರಗಳನ್ನು ನೀಡಿ ವಂಚಿಸುತ್ತಿದ್ದರು.ನೇಮಕಾತಿ ಪತ್ರ ಪಡೆದು ಕೆಲಸಕ್ಕೆ ಹೋದಾಗ ಅದು ನಕಲಿ ಎಂದು ತಿಳಿದು ಯುವಕರು ಕಂಗಾಲಾಗಿದ್ದಾರೆ. ಮೋಸ ಹೋದ ಸಂತ್ರಸ್ತರು ಸಿಸಿಬಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಪ್ಪ-ಮಗಳನ್ನು ಜೈಲಿಗಟ್ಟಿದ್ದಾರೆ. ಸದ್ಯ ಬಂಧಿತರಿಂದ ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆ ಮುಂದುವರಿಸಲಾಗಿದೆ. ಈ ಘಟನೆಯು ಸರ್ಕಾರಿ ಕೆಲಸದ ಆಸೆಯಲ್ಲಿರುವ ಯುವಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಮಧ್ಯವರ್ತಿಗಳ ಮಾತನ್ನು ನಂಬಿ ಹಣ ಕಳೆದುಕೊಳ್ಳದಂತೆ ಪೊಲೀಸರು ಮನವಿ ಮಾಡಿದ್ದಾರೆ.
