ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಐಆರ್ ಪ್ರಕ್ರಿಯೆಗೆ ನಿಯೋಜಿಸಿರುವುದರಿಂದ, ಜನನ ಮತ್ತು ಮರಣ ಪ್ರಮಾಣಪತ್ರ ನೋಂದಣಿ ಸೇವೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ದಿನವಿಡೀ ಲಭ್ಯವಿರುತ್ತಿದ್ದ ಅರ್ಜಿ ಸಲ್ಲಿಕೆ ಇದೀಗ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಪಾಲಿಕೆ ಕಚೇರಿಯಲ್ಲಿ ಅಳವಡಿಸಿರುವ ಪ್ರಕಟಣೆಯ ಪ್ರಕಾರ, ಜೂನ್ 30 ರಿಂದ ಜುಲೈ 29 ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಜನನ ಮತ್ತು ಮರಣ ಪ್ರಮಾಣಪತ್ರಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿದೆ. ಪರಿಣಾಮ ಪ್ರತಿದಿನ ಬೆಳಗ್ಗೆ ನೂರಾರು ನಾಗರಿಕರು ಕಚೇರಿಯ ಹೊರಗೆ ಜಮಾಯಿಸುತ್ತಿದ್ದು, ಸುದೀರ್ಘ ಸಾಲಿನಲ್ಲಿ ನಿಲ್ಲುವಂತಾಗಿದೆ.
ನವಜಾತ ಶಿಶುಗಳ ಜನನ ಪ್ರಮಾಣಪತ್ರಕ್ಕಾಗಿ ಪೋಷಕರು, ಮರಣ ಪ್ರಮಾಣಪತ್ರಕ್ಕಾಗಿ ಮೃತಪಟ್ಟವರ ಕುಟುಂಬಸ್ಥರು ಹಾಗೂ ಪಿಂಚಣಿ, ವಿಮೆ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಅಧಿಕೃತ ಕೆಲಸಗಳಿಗಾಗಿ ಪ್ರಮಾಣಪತ್ರ ಅಗತ್ಯವಿರುವ ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸಮಯದ ಮಿತಿಯಿಂದಾಗಿ ತಮ್ಮ ಸರದಿ ಬರುವ ಮುನ್ನವೇ ಕೌಂಟರ್ಗಳು ಮುಚ್ಚುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ವಿಶೇಷ ಕಾರ್ಯಗಳಿಗಾಗಿ ಸಿಬ್ಬಂದಿಯನ್ನು ನಿಯೋಜಿಸುವುದು ಅನಿವಾರ್ಯವಾಗಿದ್ದರೂ, ಅಗತ್ಯ ಸಾರ್ವಜನಿಕ ಸೇವೆಗಳ ನಿರಂತರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿಯಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳು ಕಾನೂನುಬದ್ಧವಾಗಿ ಕಡ್ಡಾಯವಾಗಿರುವ ಮತ್ತು ತುರ್ತಾಗಿ ಅಗತ್ಯವಿರುವ ದಾಖಲೆಗಳಾಗಿರುವುದರಿಂದ, ಇವುಗಳ ವಿತರಣೆಯಲ್ಲಿನ ವಿಳಂಬವು ನಾಗರಿಕರ ದೈನಂದಿನ ಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಈ ಸಮಸ್ಯೆಯನ್ನು ನಿವಾರಿಸಲು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸುವುದು, ಹೆಚ್ಚಿನ ಕೌಂಟರ್ಗಳನ್ನು ತೆರೆಯುವುದು ಅಥವಾ ಅರ್ಜಿ ಸಲ್ಲಿಕೆಯ ಸಮಯವನ್ನು ವಿಸ್ತರಿಸುವಂತೆ ಸಾರ್ವಜನಿಕರು ಸಲಹೆ ನೀಡಿದ್ದಾರೆ. ಅಲ್ಲದೆ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ಪ್ರಮಾಣಪತ್ರ ವಿತರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವಂತೆ ಒತ್ತಾಯಿಸಿದ್ದಾರೆ. ಹಲವು ಮಂದಿ ಕೆಲಸ ಪೂರ್ಣಗೊಳ್ಳದೆ ಸತತವಾಗಿ ಹಲವು ದಿನಗಳ ಕಾಲ ಕಚೇರಿಗೆ ಅಲೆದಾಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
