ಬೆಳ್ತಂಗಡಿ ತಾಲ್ಲೂಕು ಕಲ್ಟಿಂಜ ಗ್ರಾಮದ ನಿಡಿಗಲ್ ಎಂಬಲ್ಲಿರುವ ಕೃಷಿ ಹಾಗೂ ಧರ್ಮಸ್ಥಳದ ದೇವಸ್ಥಾನದಲ್ಲಿ ರೆವೆನ್ಯೂ ವಿಭಾಗದ ವ್ಯವಸ್ಥಾಪಕರಾಗಿರುವ ಶುಭ ಚಂದ್ರರಾಜರವರ ಮನೆಗೆ ದರೋಡೆ ಮಾಡಲು ಬಂದು ಮನೆಯವರು ಎಚ್ಚರಗೊಂಡಾಗ ಅವರ ಮನೆಯ ನಾಯಿಯನ್ನು ಕೊಂದು ಹಾಕಿದ್ದ ಪ್ರಕರಣದಲ್ಲಿ ಆರೋಪಿಗಳಾದ ಪಿ. ಇರ್ಫಾನ್, ಚಿದಾನಂದ ಗೌಡ ಡಿ., ಮೊಹಮ್ಮದ್ ತೌಸೀಫ್, ಮೋಹನ, ನಿತಿನ್ ಕೋಟ್ಯಾನ್, ಮೊಹಮ್ಮದ್ ಆಶಿಕ್, ತೌಷಿರ್ @ ಪತ್ತೊಂಜಿ ತೌಷಿರ್ರವರುಗಳನ್ನು ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣದ ಸಾರಾಂಶ : ಪ್ರಕರಣದ ಫಿರ್ಯಾದುದಾರರಾದ ಶುಭ ಚಂದ್ರರಾಜರವರ ವಾಸ್ತವ್ಯದ
ಮನೆಯಾದ ಓಂಕಾರ ನಿಲಯ ಎಂಬಲ್ಲಿಗೆ ಈ ಪ್ರಕರಣದ ಆರೋಪಿಗಳು ಓಂಕಾರ ನಿಲಯ ಎಂಬಲ್ಲಿಗೆ ಈ ಪ್ರಕರಣದ ಆರೋಪಿಗಳು ಮನೆಯ ಕಂಪೌಂಡ್ ಒಳಗೆ ತಲವಾರು, ಖಡ್ಗ ಹಾಗೂ ಚೂರಿಗಳನ್ನು ಹಿಡಿದು ಅಕ್ರಮ ಪ್ರವೇಶ ಮಾಡಿದ ಸಮಯ ಫಿರ್ಯಾದುದಾರರ ಪಮೋರಿನ್ ನಾಯಿಯು ಬೊಗಳುತ್ತಿದ್ದನ್ನು ಕಂಡ ಅಪರಿಚಿತರು ಆ ನಾಯಿಯನ್ನು ಅವರಲ್ಲಿದ್ದ ಚೂರಿ ಮತ್ತು ಖಡ್ಗದಿಂದ ಇರಿದು ಹತ್ಯೆ ಮಾಡಿ ನಂತರ ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದಾಗ ಎಚ್ಚರಗೊಂಡ ಫಿರ್ಯಾದುದಾರರು ಮತ್ತು ಮನೆಯವರು ಎಲ್ಲರೂ ಜೋರಾಗಿ ಬೊಬ್ಬೆ ಹೊಡೆದಾಗ ಅವರುಗಳು ಬಂದಿದ್ದ ಬ್ರಿಝಾ ಕಾರಿನಲ್ಲಿ ಉಜಿರೆ ಕಡೆಗೆ ಹೋಗಿರುತ್ತಾರೆ ಎಂಬುದಾಗಿ ಆರೋಪಿಸಿ, ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಜೇಶ್ ಮಾರುತಿ ಕಮಾಟೆಯವರು ಪ್ರಾಸಿಕ್ಯೂಷನ್ ಪರ ಸುಮಾರು 15 ಜನ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದು, ಅದರಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರಕರಣಕ್ಕೆ ಪೂರಕ ಸಾಕ್ಷಿ ನುಡಿದಿದ್ದರು. ನಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಅದರ ಪರವಾಗಿ ಪಶು ವೈದ್ಯಕೀಯ ವೈದ್ಯರು ಮಾನ್ಯ ನ್ಯಾಯಾಲಯದಲ್ಲಿ ಪೂರಕ ಸಾಕ್ಷಿ ನುಡಿದಿದ್ದರು. ಆದರೆ ಪ್ರಾಸಿಕ್ಯೂಶನ್ ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ಮನಗಂಡು ಮಾನ್ಯ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುತ್ತಾರೆ.
ಆರೋಪಿಗಳ ಪರವಾಗಿ ವಕೀಲರಾದ ಶ್ರೀ ವೇಣುಕುಮಾರ್ ಮತ್ತು ಯುವರಾಜ್ ಕೆ ಅಮೀನ್ ವಾದಿಸಿದ್ದರು.
