ಮಂಗಳೂರು:ಕೇಂದ್ರ ಮಾರುಕಟ್ಟೆಯ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಹಾಗೂ ಅಕ್ರಮದ ಆರೋಪಗಳು ಕೇಳಿಬಂದಿವೆ. ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಜಾಯಿಂಟ್ ಕಾಮಗಾರಿ ಎಂಬ ನೆಪದಲ್ಲಿ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದ್ದು, 60:40ರ ಅನುಪಾತದಲ್ಲಿ ಸಂಸ್ಥೆಗೆ ಶೇ.60ರಷ್ಟು ಹಾಗೂ ಮಹಾನಗರ ಪಾಲಿಕೆಗೆ ಶೇ.40ರಷ್ಟು ಪಾಲು ಇರುವುದಾಗಿ ಆರೋಪಿಸಲಾಗಿದೆ.
ಮಾರುಕಟ್ಟೆ ನಿರ್ಮಾಣದ ಹೆಸರಿನಲ್ಲಿ ಇದೀಗ ಬೃಹತ್ ಮಾಲ್ ಮಾದರಿಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಇದು ಸಾಂಪ್ರದಾಯಿಕ ಮಾರುಕಟ್ಟೆಯ ಸ್ವರೂಪದಲ್ಲೇ ಇಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಈ ಕಾಮಗಾರಿಯಲ್ಲಿ ಕೋಟಿ ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನು ಮೀನು ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಯ ಮಧ್ಯೆ ಇದ್ದ ಸರ್ಕಾರಿ ರಸ್ತೆ ಇದೀಗ ಕಾಣೆಯಾಗಿದ್ದು, ರಸ್ತೆಯ ಜಾಗವನ್ನೇ ಆಕ್ರಮಿಸಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಸಾರ್ವಜನಿಕರ ಬಳಕೆಯಲ್ಲಿದ್ದ ಸರ್ಕಾರಿ ರಸ್ತೆಯನ್ನು ಯಾವ ಆಧಾರದ ಮೇಲೆ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ? ಕಾಮಗಾರಿಗೆ ಅನುಮತಿ ನೀಡಿದವರು ಯಾರು? 60:40ರ ಒಪ್ಪಂದದ ಸಂಪೂರ್ಣ ವಿವರವೇನು? ಕಾಮಗಾರಿಯಲ್ಲಿ ಸರ್ಕಾರದ ಹಣದ ಬಳಕೆ ಹಾಗೂ ಪಾಲುದಾರಿಕೆಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಮೂಡಿವೆ.
ಈ ಹಿನ್ನೆಲೆಯಲ್ಲಿ ಮಾನ್ಯ ಉಸ್ತುವಾರಿ ಸಚಿವರು ಕೂಡಲೇ ಪ್ರಕರಣದ ಬಗ್ಗೆ ಗಮನಹರಿಸಿ, ಕಾಮಗಾರಿಯ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.















