ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಕಾವಳಪಡೂರು ಗ್ರಾಮದ ರಾಜಪಲ್ಕೆ ನಿವಾಸಿ ಡೋಗ್ರ ಮೂಲ್ಯ ಎಂಬವರ ಪತ್ನಿ ಉಪಾಲಕ್ಷ್ಮಿ ಮನೆಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ನೀರು ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಸುಮಾರು 3 ಲಕ್ಷ ಮೌಲ್ಯದ ಎರಡುವರೆ ಪವನ್ ಚಿನ್ನದ ಕರಿಮಣಿ ಸರವನ್ನು ಎಳೆದೊಯ್ದ ಘಟನೆ ನಡೆದಿದೆ.
ಸಂಜೆ 4 ಗಂಟೆ ಅಂದಾಜಿಗೆ ಅಪರಿಚಿತ ವ್ಯಕ್ತಿಯೋರ್ವ ಉಪಾಲಕ್ಷ್ಮಿ ಎಂಬವರ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಜಗುಲಿಯಲ್ಲಿ ಬಂದು ಕುಳಿತು ಕುಡಿಯುವ ನೀರು ಕೇಳಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಹಿಳೆ ಸ್ವತಃ ನೀರು ತರಲೆಂದು ಮನೆಯೊಳಗೆ ಹೋದ ವೇಳೆ ಆರೋಪಿ ಆಕೆಯ ಹಿಂದೆಯೇ ಓಳಗೆ ಹೋಗಿ ವೃದ್ಧೆಯನ್ನು ಹಿಡಿದು, ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಕುತ್ತಿಗೆಯಲ್ಲಿದ್ದ ಸರವನ್ನು ಬಲತ್ಕಾರವಾಗಿ ಎಳೆದು ಪರಾರಿಯಾಗಿದ್ದಾನೆ.
ವೃದ್ಧೆಯ ಗಂಡ ಘಟನೆ ನಡೆಯುವ ಕೆಲವೇ ಸಮಯದ ಹಿಂದೆ ಪೇಟೆಯ ಕಡೆಗೆ ಹೋಗಿದ್ದರು. ಇವರ ಮಗ ವಗ್ಗದಲ್ಲಿ ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು ಎನ್ನಲಾಗಿದೆ. ಇದೇ ಸಮಯದ ಲಾಭ ಪಡೆದು ಈತ ಬಂಗಾರವನ್ನು ಕದ್ದುಕೊಂಡು ಹೋಗಿದ್ದಾನೆ. ಮಹಿಳೆಯ ಗಂಡ ರಾತ್ರಿ ಮನೆಗೆ ಬಂದಾಗ ಪತ್ನಿಯನ್ನು ಕೈಕಾಲು ಕಟ್ಟಿ ಹಾಕಿರುವುದು ಕಂಡು ಬಂದಿದೆ ಎಂದು ಮನೆಯವರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಎಸ್.ಐ. ಮಂಜುನಾಥ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.
