ಬಾಗಲಕೋಟೆ: ಕಾಲೇಜು ವಿದ್ಯಾರ್ಥಿನಿಗೆ ನಡುರಸ್ತೆಯಲ್ಲಿ ಕಾಮುಕನೊಬ್ಬ ತನ್ನ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಪೊಲೀಸರು ಕಾಮುಕನನ್ನು ಬಂಧಿಸುವುದನ್ನು ಬಿಟ್ಟು ಯುವತಿಯ ರಕ್ಷಣೆಗೆ ಬಂದಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಪೊಲೀಸರ ನಡೆಗೆ ಬಂಧಿತ ಯುವಕರ ಪೋಷಕರು ಹಾಗೂ ನೊಂದ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಬಿಟ್ಟು ರಕ್ಷಣೆಗೆ ಬಂದವರನ್ನೇ ಬಂಧಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯ ನವನಗರದ ಬಳಿ ಸೆ.17ರಂದು ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಂಡು ಕಾಮುಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಇಬ್ಬರು ಯುವಕರು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀಪ್ ನಾಡಗೌಡ ಎಂಬಾತ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ.
ನವನಗರ ಪೊಲೀಸರು ಕಾಮುಕ ಸುದೀಪ್ ನಾಡಗೌಡನನ್ನು ಬಂಧಿಸುವುದನ್ನು ಬಿಟ್ಟು, ಯುವತಿಯ ರಕ್ಷಣೆಗೆ ಬಂದಿದ್ದ ಚೇತನ್ ಕೋಡಬಾಗಿ ಹಾಗೂ ರೋಹನ್ ಹಾದಿಮನಿ ಎಂಬುವವರನ್ನು ಬಂಧಿಸಿದ್ದಾರೆ. ಪೊಲೀಸರ ನಡೆಗೆ ಬಂಧಿತ ಯುವಕರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆಯ ನೆಪಹೇಳಿ ಆರೋಪಿ ಸುದೀಪ್ ನಾಡಗೌಡನನ್ನು ಬಂಧಿಸುತ್ತಿಲ್ಲ. ಯುವತಿಯನ್ನು ರಕ್ಷಿಸಿದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಚೇತನ್ ಹಾಗೂ ರೋಹನ್ ನನ್ನ ಸಹಾಯಕ್ಕೆ ಬಂದವರು. ಅವರನ್ನು ಬಿಡುಗಡೆ ಮಾಡುವಂತೆ ನೊಂದ ಯುವತಿ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಪೊಲೀಸರ ಹುಚ್ಚಾಟಕ್ಕೆ ನವನಗರ ಜನರು ಕೂಡ ಕಿಡಿಕಾರಿದ್ದಾರೆ.















