ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಭಾರಿ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು, ರಾಯಚೂರು, ಶಿವಮೊಗ್ಗ ಹಾಗೂ ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಮುಂಜಾನೆಯೇ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಕುಂಬಳಗೂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಬಿ.ಕೆ. ತಿಮ್ಮಯ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡು, ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಿಕರ ಮನೆಗಳ ಮೇಲೂ ರೇಡ್: ಪಿಡಿಒ ತಿಮ್ಮಯ್ಯ ಅವರಿಗೆ ಸೇರಿದ ತೋಟದ ಮನೆ, ಅವರ ಅಣ್ಣ ರಾಮಚಂದ್ರಯ್ಯ ಹಾಗೂ ಅಕ್ಕನ ಮಗ ದಿಲೀಪ್ ಅವರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ ಬೆಂಗಳೂರಿನ ಒಟ್ಟು ನಾಲ್ಕು ಕಡೆಗಳಲ್ಲಿ ಪರಿಶೀಲನೆ ಮುಂದುವರಿದಿದೆ.
ರಾಯಚೂರು: ಕೆಬಿಜೆಎನ್ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ
ರಾಯಚೂರಿನಲ್ಲೂ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಪತ್ತೆಗೆ ಬಲೆ ಬೀಸಿದ್ದಾರೆ. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯಪಾಲಕ ಇಂಜಿನಿಯರ್ (EE) ಬಸನಗೌಡ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿಯಲ್ಲಿ ಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಬಸನಗೌಡ ಅವರು ಪತ್ನಿ ಹೆಸರಿನಲ್ಲಿ ಭಾರಿ ಪ್ರಮಾಣದ ಆಸ್ತಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ರಾಯಚೂರಿನ ಹೆಚ್.ಆರ್.ಬಿ (HRB) ಲೇಔಟ್ನಲ್ಲಿರುವ ಇಇ ಬಸನಗೌಡ ಮನೆ, ಯಕ್ಲಾಸಪುರದಲ್ಲಿರುವ ಮೂರು ಮನೆಗಳು ಹಾಗೂ ತೋಟದ ಮನೆ.
ಇವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ‘ಶ್ರೀ ಫಿಲ್ಲಿಂಗ್ ನಾಯರಾ’ ಪೆಟ್ರೋಲ್ ಬಂಕ್, ರಾಯಚೂರು ಬೈಪಾಸ್ ರಸ್ತೆಯ ಮತ್ತೊಂದು ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲಿರುವ ಗೋದಾಮು (ಗೊಡೌನ್), ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಚಿಕ್ಕಹೊನ್ನಕುಣಿಯ ಕೆಬಿಜೆಎನ್ಎಲ್ನ 4ನೇ ಕಚೇರಿಯಲ್ಲೂ ಶೋಧ ಕಾರ್ಯ ಮುಂದುವರಿದಿದೆ.
ಇತ್ತ ಶಿವಮೊಗ್ಗ ಮತ್ತು ಧಾರವಾಡದಲ್ಲೂ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆ ನಡೆದಿದೆ. ಸಹಾಯಕ ಅರಣ್ಯ ACF ಕಿರಣ್ ಅಂಗಡಿ ಅವರ ಮನೆ, ಕಚೇರಿ ಮತ್ತು ಫಾರ್ಮ್ ಹೌಸ್ಗಳ ಮೇಲೆ ದಾಳಿ ಮಾಡಲಾಗಿದೆ.
ನಾಲ್ಕು ಕಡೆ ಏಕಕಾಲಕ್ಕೆ ದಾಳಿ: ಶಿವಮೊಗ್ಗದ ಕಚೇರಿ ಹಾಗೂ ಧಾರವಾಡದ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ ನಗರದ ದೊಡ್ಡ ನಾಯಕನಕೊಪ್ಪ ಬಡಾವಣೆಯಲ್ಲಿರುವ ಕಿರಣ್ ಅಂಗಡಿ ಅವರ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಇವರ ಮಾಲೀಕತ್ವದ ಫ್ಯಾಕ್ಟರಿ (ಕಾರ್ಖಾನೆ) ಮೇಲೆ ಶಿವಮೊಗ್ಗ ಹಾಗೂ ಧಾರವಾಡದ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
