ಮಂಗಳೂರು : ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಕಾರು ಚಾಲಕನೋರ್ವ ಕೆಎಸ್ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಬುಧವಾರ ಬೆಳಿಗ್ಗೆ ವಳಚ್ಚಿಲ್ ಜಂಕ್ಷನ್ ಬಳಿ ಸಂಭವಿಸಿದೆ.
ರಾಜಶೇಖರ್ ಎಂಬುವವರು ಕೆಎಸ್ಆರ್ ಟಿಸಿ ಪುತ್ತೂರು ವಿಭಾಗದ ಬಿ.ಸಿ ರೋಡ್ ಘಟಕದಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಮೇ 6ರಂದು ಬೆಳಿಗ್ಗೆ ಇವರು ಚಾಲಕ ಪಿ. ಜಯರಾಮ ಅವರೊಂದಿಗೆ ಮಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ವಳಚ್ಚಿಲ್ ಜಂಕ್ಷನ್ನಲ್ಲಿ ಬ್ಯಾರಿಕೇಡ್ ಇದ್ದ ಕಾರಣ ಬಸ್ ಚಾಲಕರಿಗೆ ಹಿಂದಿನಿಂದ ಬಂದ ಕಾರಿಗೆ ಸೈಡ್ ನೀಡಲು ಸಾಧ್ಯವಾಗಲಿಲ್ಲ.
ನಂತರ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದಾಗ, ಕಾರು ಚಾಲಕನು ಬಸ್ಸಿಗೆ ಅಡ್ಡವಾಗಿ ಕಾರು ನಿಲ್ಲಿಸಿ ಅಕ್ರಮವಾಗಿ ಪ್ರತಿಬಂಧಿಸಿದ್ದಾನೆ. ಬಸ್ ಚಾಲಕ ಜಯರಾಮ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾನೆ. ಈ ದೃಶ್ಯವನ್ನು ನಿರ್ವಾಹಕ ರಾಜಶೇಖರ್ ಅವರು ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾದಾಗ, ಆರೋಪಿಯು ಅವರ ಕೆನ್ನೆಗೆ ಹೊಡೆದು, ಸಮವಸ್ತ್ರ ಹಿಡಿದು ಎಳೆದಾಡಿ ಹರಿದು ಹಾಕಿದ್ದಾನೆ. ಹಲ್ಲೆಯಿಂದ ಗಾಯಗೊಂಡ ರಾಜಶೇಖರ್ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
