ಮಂಗಳೂರು: ನಗರದ ಬಂದರು, ಅಳಕೆ, ಸ್ಟೇಟ್ ಬ್ಯಾಂಕ್, ಪಾಂಡೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನಗರದಲ್ಲಿ ನಡೆಯುವ ಹಲವು ಪ್ರಕರಣಗಳಲ್ಲಿ ಬಾಡಿಗೆದಾರರ ಹಿನ್ನೆಲೆ ಕುರಿತು ಪರಿಶೀಲನೆ ಅಗತ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಸ್ಟೇಟ್ ಬ್ಯಾಂಕ್ ಭಾಗದಲ್ಲಿ ಅಸ್ಸಾಂ, ಬಿಹಾರ ಸೇರಿದಂತೆ ವಿವಿಧ ಹೊರ ರಾಜ್ಯಗಳ ಕೆಲವರು ರಾತ್ರಿ ವೇಳೆ ಮದ್ಯ ಸೇವಿಸಿ ರಸ್ತೆ ಬದಿ ಗಲಾಟೆ ನಡೆಸುವ ಘಟನೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಹೆಚ್ಚಿನ ಬಾಡಿಗೆ ಸಿಗುತ್ತದೆ ಎಂಬ ಕಾರಣಕ್ಕೆ ಕೆಲ ಮನೆ ಮಾಲೀಕರು ಬಾಡಿಗೆದಾರರ ಹಿಂದು ಮುಂದು ಪರಿಶೀಲಿಸದೆ ಮನೆಗಳನ್ನು ಬಾಡಿಗೆ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಂಗಳೂರಿನಲ್ಲಿ ನಡೆಯುವ ಸರ ಕಳ್ಳತನ, ಮನೆ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಹೊರ ರಾಜ್ಯದ ಆರೋಪಿಗಳು ಪತ್ತೆಯಾಗಿರುವ ಘಟನೆಗಳೂ ವರದಿಯಾಗಿವೆ.
ಸ್ಥಳೀಯ ಪೊಲೀಸರು ಮನೆ ಮಾಲೀಕರಿಂದ ಬಾಡಿಗೆದಾರರ ವಿವರಗಳನ್ನು ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಡಿಗೆಗೆ ವಾಸಿಸುವ ಪ್ರತಿಯೊಬ್ಬರ ಗುರುತಿನ ದಾಖಲೆ ಹಾಗೂ ಭಾವಚಿತ್ರ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡುವ ವ್ಯವಸ್ಥೆ ಜಾರಿಯಾದರೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ.
