ಕೊಪ್ಪಳ: ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳ ವಿಚಾರ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಎಂದು ಬಿಂಬಿತವಾಗಿದ್ದ ಈ ದೇಣಿಗೆಯು, ವಾಸ್ತವದಲ್ಲಿ ‘ಚಿನ್ನ ಲೇಪಿತ’ ತಾಮ್ರದ ಆಭರಣಗಳೆಂದು ಜಿಲ್ಲಾಡಳಿತದ ಪರಿಶೀಲನೆಯಲ್ಲಿ ಬಯಲಾಗಿದೆ.
ಹೈದರಾಬಾದ್ ಮೂಲದ ಎಎಂಆರ್ ಗ್ರೂಪ್ ಉದ್ಯಮಿ ಮಹೇಶ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಇತ್ತೀಚೆಗಷ್ಟೇ ಅಂಜನಾದ್ರಿಗೆ ಆಗಮಿಸಿ ಸ್ವಾಮಿಗೆ ಪ್ರಭಾವಳಿ, ಚಕ್ರ, ಕಿರೀಟ ಹಾಗೂ ಗದೆಯೂ ಸೇರಿದಂತೆ ಒಟ್ಟು 12 ಕಲಾಕೃತಿಗಳನ್ನು ದಾನವಾಗಿ ನೀಡಿದ್ದರು. ಆ ಸಮಯದಲ್ಲಿ ಈ ಆಭರಣಗಳ ಮೌಲ್ಯ ಸುಮಾರು 2.50 ಕೋಟಿ ರೂಪಾಯಿ ಎಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳಲಾಗಿತ್ತು. ಉದ್ಯಮಿಯ ಮನವಿಯ ಮೇರೆಗೆ ಎರಡು ದಿನಗಳ ಕಾಲ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು.
ದೇವಸ್ಥಾನದ ನಿಯಮದಂತೆ ಯಾವುದೇ ಅಮೂಲ್ಯ ವಸ್ತುಗಳನ್ನು ದೇವಸ್ಥಾನದ ಖಜಾನೆಗೆ (Treasury) ಸೇರಿಸುವ ಮೊದಲು ಅವುಗಳ ಅಧಿಕೃತ ಬಿಲ್ ಮತ್ತು ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಉದ್ಯಮಿಗೆ ನೋಟಿಸ್ ನೀಡಿ ಖರೀದಿಯ ಬಿಲ್ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಉದ್ಯಮಿ ಮಹೇಶ ರೆಡ್ಡಿ ಅವರು ಸಲ್ಲಿಸಿರುವ ಬಿಲ್ನಿಂದ ಅಸಲಿ ವಿಚಾರ ಹೊರಬಂದಿದೆ.
ಬಿಲ್ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಈ ಆಭರಣಗಳು ಸಂಪೂರ್ಣ ಬಂಗಾರದ್ದಲ್ಲ. ಇವು ತಾಮ್ರದಿಂದ ತಯಾರಾದ ಕಲಾಕೃತಿಗಳಾಗಿದ್ದು, ಇವುಗಳ ಮೇಲೆ ಚಿನ್ನದ ಲೇಪನವನ್ನು ಮಾಡಲಾಗಿದೆ. ಜಿಲ್ಲಾಡಳಿತದ ಪ್ರಾಥಮಿಕ ತಪಾಸಣೆಯ ಪ್ರಕಾರ, ಇಡೀ ಆಭರಣಗಳಲ್ಲಿರುವ ಅಸಲಿ ಬಂಗಾರದ ಅಂಶ ಕೇವಲ 28 ಗ್ರಾಂ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, “ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ನೀಡುವ ಚಿನ್ನಾಭರಣ, ಬೆಳ್ಳಿ ಅಥವಾ ಇತರೆ ಅಮೂಲ್ಯ ವಸ್ತುಗಳನ್ನು ಲೋಹ ಶೋಧಕರು ಮತ್ತು ಅಧಿಕೃತ ಮೌಲ್ಯಮಾಪಕರಿಂದ ತಪಾಸಣೆ ಮಾಡಿಸಿ ದಾಖಲೆ ಇಡುವುದು ಕಡ್ಡಾಯ. ಉದ್ಯಮಿ ಸಲ್ಲಿಸಿರುವ ಬಿಲ್ ಆಧರಿಸಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದ್ದು, ಇವು ಚಿನ್ನ ಲೇಪಿತ ತಾಮ್ರದ ವಸ್ತುಗಳೆಂದು ದೃಢಪಟ್ಟಿದೆ,” ಎಂದು ತಿಳಿಸಿದ್ದಾರೆ.
ಕೋಟಿ ಕೋಟಿ ಮೌಲ್ಯದ ಚಿನ್ನದ ದಾನ ಎಂದು ವ್ಯಾಪಕ ಪ್ರಚಾರ ಪಡೆದಿದ್ದ ಈ ಪ್ರಕರಣ ಈಗ ಉಲ್ಟಾ ಹೊಡೆದಿರುವುದು ಭಕ್ತ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ಸದ್ಯ ಜಿಲ್ಲಾಡಳಿತವು ಈ ಆಭರಣಗಳನ್ನು ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಿದೆ
