ಮಂಡ್ಯ: ಜಿಲ್ಲಾಧಿಕಾರಿಯವರು ತಡೆ ನೀಡಿದ ಸ್ಥಳದಲ್ಲಿ ಅನಧಿಕೃತವಾಗಿ ಮತ್ತೆ ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್ ಗೌಡ ದೂರಿದರು.
ಮಾ.11ರಂದು ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿನ ಅನಧಿಕೃತ ಕಲ್ಲು ಗಣಿಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಿಸಲು ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದರು. ಅದನ್ನು ಸಾಕಾರಗೊಳಿಸುವಲ್ಲಿ ‘ಟಾಸ್ಕ್ ಫೋರ್ಸ್’ ಸಮಿತಿ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲಾದ್ಯಂತ 103 ಕಲ್ಲು ಕೋರೆಗಳಿದ್ದು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲೇ 52 ಕೇಂದ್ರಗಳಿವೆ. ಅವುಗಳಲ್ಲಿ 22ಕ್ಕೆ ಮಾತ್ರ ಪರವಾನಗಿ ಪಡೆಯಲಾಗಿದೆ. ಉಳಿದೆಡೆ ‘ಸಿ’ ಫಾರಂ ಪಡೆದಿರುವುದಾಗಿ ಹೇಳಿ ಅರಣ್ಯ ಪ್ರದೇಶದಲ್ಲೆಲ್ಲ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇವುಗಳಿಗೆ ಸಿ.ಫಾರಂ ನೀಡಿರುವ ಗಣಿ ಇಲಾಖೆಯವರೇ ಹೊಣೆಗಾರರೆಂದು ದೂರಿದರು.
ಈ ಅನಧಿಕೃತ ಕೋರೆಗಳಲ್ಲಿ ರಾತ್ರಿ ವೇಳೆಯಲ್ಲಿ ಕಲ್ಲು ಸ್ಫೋಟಿಸಲಾಗುತ್ತಿದೆ ಎಂದು ಸ್ಥಳೀಯರು, ಹೋರಾಟಗಾರರು ದೂರಿದರೆ ಗಣಿ ಇಲಾಖೆಯವರು ಪರಿಶೀಲಿಸುವುದಾಗಿ ತಿಳಿಸಿ ಯಾವುದೇ ಕ್ರಮವಹಿಸುವುದಿಲ್ಲ. ಬೆಂಗಳೂರಿನಿಂದ ಇವುಗಳಿಗೆ ಸ್ಫೋಟಕಗಳು ಸರಬರಾಜಾಗುತ್ತಿರುವುದು ತಿಳಿದಿದ್ದರೂ ಜಿಲ್ಲೆಯ ಪೊಲೀಸರೇ ಸ್ಫೋಟಕ ಸಾಗಣೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು. ಇವುಗಳಿಂದ ಪ್ರತಿ ನಿತ್ಯ ಒಂದು ಸಾವಿರ ಟನ್ ನಷ್ಟು ಕಲ್ಲು ನುರಿದು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ.
ಇದರಿಂದ ವಾರ್ಷಿಕ ₹200 ಕೋಟಿ ರಾಜಧನ ನಷ್ಟವಾಗುತ್ತಿದೆ. ನೆಪಮಾತ್ರಕ್ಕೆ ಅಲ್ಲಲ್ಲಿ ವಾಹನಗಳನ್ನು ತಡೆದು ಹಣ ಪಡೆದು ಬಿಟ್ಟು ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಅರಣ್ಯ, ಪೊಲೀಸ್, ಗಣಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೇ ಇದ್ದು, ಅವರೇ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಾಲೂಕಿನ ಟಿ.ಎಂ. ಹೊಸೂರು, ಹಂಗರಹಳ್ಳಿ, ಜಕ್ಕನಹಳ್ಳಿ, ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಹಾಗೂ ಅಕ್ರಮ ಕಲ್ಲುಗಣಿಗಾರಿಕೆ ತಡೆಯಲು ಕ್ರಮವಹಿಸುವಂತೆ ಆಗ್ರಹಿಸಿದರು.
