ಬೆಂಗಳೂರು: ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 10 ಜನ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೃಹತ್ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಚಿತ್ರದುರ್ಗ, ಕಲಬುರಗಿ, ಶಿವಮೊಗ್ಗ, ರಾಯಚೂರು ಮತ್ತು ತುಮಕೂರು ಸೇರಿದಂತೆ ಒಟ್ಟು 53 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿಯ ವೇಳೆ ಅಧಿಕಾರಿಗಳು ಭಾರಿ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ-ಚರಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯಲ್ಲಿ ಸದ್ಯಕ್ಕೆ ಬರೋಬ್ಬರಿ ₹49.83 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿವೆ. ಆರೋಪಿತ ಅಧಿಕಾರಿಗಳ ಆದಾಯದ ಮೂಲಗಳಿಗೂ ಹಾಗೂ ಅವರ ಬಳಿ ಇರುವ ಆಸ್ತಿಪಾಸ್ತಿಗಳಿಗೂ ಭಾರಿ ಅಸಮತೋಲನ ಇರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸದ್ಯ ಸಿಕ್ಕಿರುವ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ಹೆಚ್ಚಿನ ಪರಿಶೀಲನೆಯನ್ನು ಚುರುಕುಗೊಳಿಸಿದ್ದಾರೆ.
ನರೇಂದ್ರ ಕುಮಾರ್.ಎಂ (ಲೋಕೋಪಯೋಗಿ ಇಲಾಖೆ, ಬೆಂಗಳೂರು)
ಹುದ್ದೆ: ಸಹಾಯಕ ಅಭಿಯಂತರರು (AE) ಇವರಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು (ಮೌಲ್ಯ 5.95 ಕೋಟಿ) ಪತ್ತೆಯಾಗಿದೆ. ಇದರೊಂದಿಗೆ 3.10 ಲಕ್ಷ ನಗದು, 1.20 ಕೋಟಿ ಮೌಲ್ಯದ ಚಿನ್ನಾಭರಣ, 16.60 ಲಕ್ಷದ ವಾಹನಗಳು ಹಾಗೂ 89.16 ಲಕ್ಷ ಬ್ಯಾಂಕ್ ಠೇವಣಿ ಸೇರಿ ಒಟ್ಟು 8.51 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ.
ಪ್ರವೀಣ್ ಶ್ರೀಹರಿ ಬಿ (ಕೆ.ಆರ್.ಐ.ಡಿ.ಎಲ್, ಬೆಂಗಳೂರು)
ಹುದ್ದೆ: ಅಧೀಕ್ಷಕ ಅಭಿಯಂತರರು (SE), ಕೆ.ಆರ್.ಐ.ಡಿ.ಎಲ್, ಬೆಂಗಳೂರು. ಇವರ 5 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, 2 ನಿವೇಶನ, 2 ವಾಸದ ಮನೆ, 11 ಎಕರೆ ಕೃಷಿ ಭೂಮಿ (ಮೌಲ್ಯ 4.60 ಕೋಟಿ) ಪತ್ತೆಯಾಗಿದೆ. 2.35 ಲಕ್ಷ ನಗದು, 11.08 ಲಕ್ಷದ ಚಿನ್ನ ಹಾಗೂ ಬರೋಬ್ಬರಿ 1.15 ಕೋಟಿ ಮೌಲ್ಯದ ಐಷಾರಾಮಿ ವಾಹನಗಳು ಸೇರಿದಂತೆ ಒಟ್ಟು ₹5.88 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಪುಷ್ಪ ಡಿ. ಆರ್ (ಕೃಷಿ ಮಾರುಕಟ್ಟೆ ಮಹಾ ಮಂಡಳಿ, ಬೆಂಗಳೂರು)
ಹುದ್ದೆ: ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಮಾರುಕಟ್ಟೆ ಮಹಾ ಮಂಡಳಿ, ಬೆಂಗಳೂರು. ಇವರ 5 ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆದಿದ್ದು, 1 ಸೈಟು, 3 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ (ಕಮರ್ಷಿಯಲ್ ಕಾಂಪ್ಲೆಕ್ಸ್) ಹಾಗೂ 20 ಗುಂಟೆ ಜಮೀನು ಪತ್ತೆಯಾಗಿದೆ (ಮೌಲ್ಯ 7.37 ಕೋಟಿ). ಜೊತೆಗೆ 35 ಲಕ್ಷ ಮೌಲ್ಯದ ಚಿನ್ನ ಹಾಗೂ 42.50 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 8.15 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ದುಗ್ಗಪ್ಪ ಬಿ.ಹೆಚ್ (ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ)
ಹುದ್ದೆ: ವಲಯ ಅರಣ್ಯಾಧಿಕಾರಿ (RFO), ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ. ಇವರ 3 ಸ್ಥಳಗಳ ಮೇಲೆ ದಾಳಿ ನಡೆದಿದ್ದು, 3 ಸೈಟು, 1 ಮನೆ, 3 ಎಕರೆ 30 ಗುಂಟೆ ಜಮೀನು (ಮೌಲ್ಯ 1.51 ಕೋಟಿ) ಪತ್ತೆಯಾಗಿದೆ. ಇನ್ನು 8.92 ಲಕ್ಷದ ಚಿನ್ನ, 22 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 1.95 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಶಂಕರ್.ಎಂ (ತೋಟಗಾರಿಕೆ ಇಲಾಖೆ, ಚಿತ್ರದುರ್ಗ)
ಹುದ್ದೆ: ಸಹ ಪ್ರಾಧ್ಯಾಪಕರು (ಅಗ್ರಿಕಲ್ಚರಲ್ ಇಂಜಿನಿಯರಿಂಗ್), ತೋಟಗಾರಿಕೆ ಇಲಾಖೆ, ಚಿತ್ರದುರ್ಗ. ಇವರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, 1 ನಿವೇಶನ, 2 ಮನೆ, 8 ಎಕರೆ 26 ಗುಂಟೆ ಕೃಷಿ ಭೂಮಿ ಪತ್ತೆಯಾಗಿದೆ. ಹಾಗೂ 26.10 ಲಕ್ಷದ ಚಿನ್ನ, 27.80 ಲಕ್ಷದ ವಾಹನಗಳು ಹಾಗೂ ಬರೋಬ್ಬರಿ 1.02 ಕೋಟಿ ಮೌಲ್ಯದ ಇತರೆ ಐಷಾರಾಮಿ ವಸ್ತುಗಳು ಸೇರಿದಂತೆ ಒಟ್ಟು 3.27 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಅಮೃತ್ ರಾವ್ (ಜೆಸ್ಕಾಂ, ಕಲಬುರಗಿ)
ಹುದ್ದೆ: ಸಹಾಯಕ ಕಾರ್ಯಪಾಲಕ ಅಭಿಯಂತರರು (AEE), ಜೆಸ್ಕಾಂ, ಕಲಬುರಗಿ. ಬರೋಬ್ಬರಿ 7 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 3 ಸೈಟು, 2 ಮನೆ, 1 ಫ್ಲಾಟ್, 2 ವಾಣಿಜ್ಯ ಮಳಿಗೆಗಳು ಹಾಗೂ 35.80 ಲಕ್ಷ ಮೌಲ್ಯದ ಕೃಷಿ ಭೂಮಿ ಪತ್ತೆಯಾಗಿದೆ. ಮತ್ತು 38.52 ಲಕ್ಷ ಮೌಲ್ಯದ ಚಿನ್ನ, 54.58 ಲಕ್ಷ ವಿವಿಧ ಬ್ಯಾಂಕ್ ಖಾತೆಗಳ ಠೇವಣಿ ಸೇರಿದಂತೆ ಒಟ್ಟು 3.98 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ತಿಮ್ಮಯ್ಯ (ಕುಂಬಳಗೂಡು ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ)
ಹುದ್ದೆ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO), ಕುಂಬಳಗೂಡು, ಬೆಂಗಳೂರು ದಕ್ಷಿಣ. ಇವರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ದಾಳಿ ನಡೆದಿದ್ದು, 2 ಸೈಟು, 4 ವಾಸದ ಮನೆ, 4 ಎಕರೆ 15 ಗುಂಟೆ ಜಮೀನು ಪತ್ತೆಯಾಗಿದೆ (ಮೌಲ್ಯ 2.53 ಕೋಟಿ). ಜೊತೆಗೆ ಬರೋಬ್ಬರಿ 84 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 35.70 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 3.72 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಕಿರಣ್ ಅಂಗಡಿ (ಅರಣ್ಯ ಇಲಾಖೆ, ಶಿವಮೊಗ್ಗ/ಅಂಕೋಲಾ)
ಹುದ್ದೆ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF), ಸಂಶೋಧನಾ ಕೇಂದ್ರ, ಅರಣ್ಯ ಇಲಾಖೆ, ಅಂಕೋಲಾ. ಇವರಿಗೆ ಸಂಬಂಧಿಸಿದ 5 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, 1 ಮನೆ, 1 ಎಕರೆ ಕೃಷಿ ಭೂಮಿ (ಮೌಲ್ಯ 1.52 ಕೋಟಿ) ಪತ್ತೆಯಾಗಿದೆ. 5.44 ಲಕ್ಷದ ಚಿನ್ನ, 2.84 ಲಕ್ಷದ ವಾಹನ ಹಾಗೂ 33.94 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 1.94 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಬಸನಗೌಡ ಪಾಟೀಲ್ (ಕೆ.ಬಿ.ಜೆ.ಎನ್.ಎಲ್, ರಾಯಚೂರು)
ಹುದ್ದೆ: ಕಾರ್ಯಪಾಲಕ ಅಭಿಯಂತರರು (EE), ಕೆ.ಬಿ.ಜೆ.ಎನ್.ಎಲ್, ದೇವದುರ್ಗ, ರಾಯಚೂರು.ಇವರ 7 ಸ್ಥಳಗಳ ಮೇಲೆ ದಾಳಿ ಮಾಡಲಾಗಿದ್ದು, ಬರೋಬ್ಬರಿ 92 ಎಕರೆ ಕೃಷಿ ಜಮೀನು, 5 ನಿವೇಶನಗಳು, 4 ವಾಸದ ಮನೆಗಳು ಪತ್ತೆಯಾಗಿವೆ (ಸ್ಥಿರ ಆಸ್ತಿ ಮೌಲ್ಯ 8.28 ಕೋಟಿ). 28.79 ಲಕ್ಷದ ಚಿನ್ನ, 75.50 ಲಕ್ಷ ಬ್ಯಾಂಕ್ ಠೇವಣಿ ಸೇರಿದಂತೆ ಬರೋಬ್ಬರಿ 9.43 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಮಧುಸೂದನ್ ಎನ್ (ಸಣ್ಣ ನೀರಾವರಿ ಇಲಾಖೆ, ತುಮಕೂರು)
ಹುದ್ದೆ: ಸಹಾಯಕ ಅಭಿಯಂತರರು (AE), ಸಣ್ಣ ನೀರಾವರಿ ಇಲಾಖೆ, ತಿಪಟೂರು, ತುಮಕೂರು. ಇವರ 5 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 3 ಸೈಟು, 1 ವಾಸದ ಮನೆ (ಮೌಲ್ಯ 1.62 ಕೋಟಿ) ಪತ್ತೆಯಾಗಿದೆ. ಜೊತೆಗೆ 11.94 ಲಕ್ಷ ನಗದು, ಬರೋಬ್ಬರಿ 94.04 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 27 ಲಕ್ಷದ ವಾಹನಗಳು ಸೇರಿದಂತೆ ಒಟ್ಟು 2.95 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
