ಮಂಗಳೂರು: ನಗರದ ಬೆಂಗ್ರೆ, ಸುಲ್ತಾನ್ ಬತ್ತೇರಿ ಮತ್ತು ಬೊಕ್ಕಪಟ್ಣ ಪ್ರದೇಶಗಳ ಫಲ್ಗುಣಿ ನದಿಯ ದಡದಲ್ಲಿ ಹಾಗೂ ನೀರಿನಲ್ಲಿ ಶನಿವಾರ ಸತ್ತ ಮತ್ತು ಅರೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಮೀನುಗಳು ಪತ್ತೆಯಾಗಿದ್ದು, ಕಳವಳ ಮೂಡಿಸಿದೆ.ಸ್ಥಳೀಯ ಮೀನುಗಾರರು ಶನಿವಾರ ಮುಂಜಾನೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಈ ಮೀನುಗಳನ್ನು ಗಮನಿಸಿದ್ದಾರೆ. ರಾಸಾಯನಿಕಯುಕ್ತ ಕಲುಷಿತ ನೀರಿನಿಂದ ಮೀನುಗಳು ಸಾವನ್ನಪ್ಪಿರಬಹುದು ಎಂದು ಅವರು ಶಂಕಿಸಿದ್ದಾರೆ.ಬೆಂಗ್ರೆ ಮತ್ತು ಸುಲ್ತಾನ್ ಬತ್ತೇರಿ ನಡುವಿನ ಸೇತುವೆ ಕಾಮಗಾರಿಗಾಗಿ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಈಗ ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಈ ತಡೆಗೋಡೆಯಿಂದಾಗಿ ಮರವೂರು ಅಣೆಕಟ್ಟಿನವರೆಗೂ ನೀರು ನಿಂತುಹೋಗಿತ್ತು.ಬೇಸಿಗೆಯ ಅವಧಿಯಲ್ಲಿ, ಕೈಗಾರಿಕೆಗಳ ತ್ಯಾಜ್ಯ, ಮಳೆನೀರಿನ ಚರಂಡಿಗಳು ಮತ್ತು ಮಹಾನಗರ ಪಾಲಿಕೆಯ ಒಳಚರಂಡಿ ಸಂಸ್ಕರಣಾ ಘಟಕದ ಕಲುಷಿತ ನೀರು ಈ ಭಾಗದಲ್ಲಿ ಸಂಗ್ರಹವಾಗಿ, ನೀರು ಕಪ್ಪಾಗಿ ಮತ್ತು ತೀವ್ರವಾಗಿ ಕಲುಷಿತಗೊಂಡಿತ್ತು.ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಪುನರಾರಂಭಗೊಂಡಿದೆ. ಇದರೊಂದಿಗೆ, ತಡೆಗೋಡೆಯನ್ನು ತೆರವುಗೊಳಿಸುತ್ತಿರುವುದರಿಂದ ನೀರು ಕೆಳಮುಖವಾಗಿ ಹರಿಯಲಾರಂಭಿಸಿದೆ. ಹೊಸ ನೀರು ಬಂದಾಗ ಮೀನುಗಳು ಮೇಲ್ಮುಖವಾಗಿ ಈಜುತ್ತವೆ. ಆದರೆ, ನೀರಿನಲ್ಲಿರುವ ರಾಸಾಯನಿಕ ಕಲುಷಿತ ಅಂಶಗಳಿಂದಾಗಿ ಮೀನುಗಳಿಗೆ ಉಸಿರಾಡಲು ಕಷ್ಟವಾಗಿ, ಹಲವು ಮೀನುಗಳು ಪ್ರಜ್ಞೆ ತಪ್ಪಿ ಬಿದ್ದಿದ್ದರೆ, ಇನ್ನು ಕೆಲವು ಮೃತಪಟ್ಟಿವೆ ಎಂದು ಮೀನುಗಾರರು ತಿಳಿಸಿದ್ದಾರೆ.ಕುಳೂರು, ಬೈಕಂಪಾಡಿ, ಜೋಕಟ್ಟೆ ಮತ್ತು ಮರವೂರು ಪ್ರದೇಶಗಳಲ್ಲಿ ಬೇಸಿಗೆಯ ಅವಧಿಯಲ್ಲಿ ನೀರಿನ ಮಟ್ಟ ಕಡಿಮೆಯಿದ್ದಾಗ ಇಂತಹ ಮೀನುಗಳ ಸಾವು ವರದಿಯಾಗಿತ್ತು. ಆದರೆ, ಬೆಂಗ್ರೆ ಮತ್ತು ಬತ್ತೇರಿ ಭಾಗದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ.ರಾಸಾಯನಿಕಗಳಿಮದ ನದಿ ನೀರು ಮಾಲಿನ್ಯವಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ ಸೇತುವೆ ಕಾಮಗಾರಿಯ ತಡೆಗೋಡೆಯಿಂದಾಗಿ ಕಲುಷಿತ ನೀರು ನಿಂತಿದ್ದೇ ಈ ಸ್ಥಿತಿಗೆ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಒಳಚರಂಡಿ ಮತ್ತು ಇತರ ಕಲುಷಿತ ವಸ್ತುಗಳನ್ನು ನದಿಗೆ ಬಿಡುವುದರಿಂದ ನದಿ ತೀವ್ರವಾಗಿ ಮಲಿನಗೊಂಡಿದ್ದು, ಸಂಸ್ಕರಿಸದ ತ್ಯಾಜ್ಯ ನೀರನ್ನು ನದಿಗೆ ಬಿಡಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
