ಅಕ್ರಮವಾಗಿ ನದಿಯಿಂದ ಮರಳು ಕದ್ದು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸ್ ಠಾಣೆ ಪೊಲೀಸರು ಪತ್ತೆಹಚ್ಚಿದ್ದು, ಸುಮಾರು 50-60 ಮೆಟ್ರಿಕ್ ಟನ್ ತೂಕದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಮೇ 8ರಂದು ಬೆಳಿಗ್ಗೆ ತೋಡಿಕಾನ ಗ್ರಾಮದ ಶೆಟ್ಟಿಯಡ್ಕ ಪ್ರದೇಶದಲ್ಲಿ ಮನು ಪೆರ್ಮುಡ ಹಾಗೂ ಚೆಂಬು ಗ್ರಾಮದ ಆ್ಯಂಟನಿ ಎಂಬವರು ಕಾನೂನು ಬಾಹಿರವಾಗಿ ನದಿಯಿಂದ ಮರಳು ತೆಗೆಯಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಮೇರೆಗೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ನೇತೃತ್ವದಲ್ಲಿ ಸುಳ್ಯ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು.ದಾಳಿ ವೇಳೆ ಸ್ಥಳದಲ್ಲಿ ಸುಮಾರು 20 ಟಿಪ್ಪರ್ ಲೋಡ್ಗೆ ಸಮಾನವಾದ 50-60 ಮೆಟ್ರಿಕ್ ಟನ್ ಮರಳು ಸಂಗ್ರಹಿಸಿರುವುದು ಪತ್ತೆಯಾಯಿತು. ಪರಿಶೀಲನೆಯ ವೇಳೆ ಆರೋಪಿಗಳು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮರಳು ಸಂಗ್ರಹಿಸಿ ಬಳಿಕ ಲಾರಿಗಳ ಮೂಲಕ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಸ್ಥಳದಲ್ಲಿದ್ದ ಅಂದಾಜು ₹1.20 ಲಕ್ಷ ಮೌಲ್ಯದ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 63/2026ರಡಿ ಪ್ರಕರಣ ದಾಖಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2), ಗಣಿ ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯ್ದೆ 1957ರ ಕಲಂ 4(1), 21 ಹಾಗೂ ಕರ್ನಾಟಕ ಗಣಿ ಖನಿಜ ಕನ್ಸೆಷನ್ ನಿಯಮಗಳು 1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
