ಸಾಲು ಸಾಲು ವಿವಾದ ಮತ್ತು ಎಡವಟ್ಟುಗಳ ಮೂಲಕ ಅಪಖ್ಯಾತಿಗೀಡಾಗಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನೇ (ಕೆಎಸ್ಎಂಎಸ್ಸಿಎಲ್) ಮಧ್ಯವರ್ತಿಯೊಬ್ಬ ( ಬ್ರೋಕರ್) ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಬಗ್ಗೆ ಗುರುತರ ಆರೋಪಗಳು ಕೇಳಿಬಂದಿದೆ.
ಪ್ರತಿ ವರ್ಷ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯಾಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಗಾಗಿ ಆರೋಗ್ಯ ಇಲಾಖೆ ಅಧೀನದ ಕೆಎಸ್ಎಂಎಸ್ಸಿಎಲ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂ. ಅನುದಾನ ಕೊಡುತ್ತಿದೆ. ಈ ಅನುದಾನ ಬಳಸಿಕೊಂಡು ನಿಗಮವು ಟೆಂಡರ್ ನಡೆಸಿ, ವಿವಿಧ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಸುತ್ತಿದೆ. ಅದರಂತೆ, ಪ್ರಸಕ್ತ ಸಾಲಿನಲ್ಲೂ ಕೋಟ್ಯಂತರ ರೂ. ಮೌಲ್ಯದ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರಲ್ಲಿ ಬಹುತೇಕ ಟೆಂಡರ್ಗಳ ಪ್ರಕ್ರಿಯೆಗಳು ಮುಗಿದು ಈಗಾಗಲೇ ಕಂಪನಿಗಳಿಗೆ ಕಾರ್ಯಾದೇಶ ಪತ್ರವನ್ನು ಕೊಡಲಾಗಿದೆ.
ವೈದ್ಯಕೀಯ ಸರಬರಾಜು ನಿಗಮ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 20 ವರ್ಷದಿಂದ ವೈದ್ಯಕೀಯ ಉಪಕರಣ ಸರಬರಾಜು ಮಾಡುತ್ತಿರುವ ಮಧ್ಯವರ್ತಿಯೊಬ್ಬ(ಲೈಸೆನ್ಸರ್), ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ವೈದ್ಯಕೀಯ ಉಪಕರಣಗಳ ಸರಬರಾಜು ಮಾಡುವುದಕ್ಕೆ ಕಂಪನಿಗಳಿಗೆ ಕೊಟ್ಟಿರುವ ಕಾರ್ಯಾದೇಶ ಪತ್ರದ ವಿವರ ಒಳಗೊಂಡ ಪಟ್ಟಿಯನ್ನು ಈಗಾಗಲೇ ಆರೋಗ್ಯ ಸಚಿವರ ಕಚೇರಿಗೆ ತಲುಪಿಸಿದ್ದಾನೆ ಎನ್ನಲಾಗುತ್ತಿದೆ.
ಸಚಿವರ ಹೆಸರೇಳಿಕೊಂಡು ಪೂರೈಕೆದಾರರಿಗೆ ಇಂತಿಷ್ಟು ಕಮಿಷನ್ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ. ಒಬ್ಬೊಬ್ಬ ವೈದ್ಯಕೀಯ ಉಪಕರಣ ಪೂರೈಕೆದಾರರಿಂದ ಶೇ.14ರಷ್ಟು ಕಮಿಷನ್ ನಿಗದಿ ಮಾಡಿದ್ದು, ಇದರಲ್ಲಿ ಶೇ.10 ಕಮಿಷನ್ ಅನ್ನು ಸಚಿವರ ಕಚೇರಿಗೆ ಮತ್ತು ಉಳಿದ ಕಮಿಷನ್ ಹಣವನ್ನು ತನ್ನ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾನೆ. ಸಚಿವರ ಕಚೇರಿಯು ಈತನ ದಂಧೆಗೆ ಸಾಥ್ ಕೊಟ್ಟಿರುವ ಆರೋಪಗಳಿವೆ. ಇದಷ್ಟೇ ಅಲ್ಲದೇ, ಕಂಪನಿಗಳ ಜತೆ ರೇಟ್ ಫಿಕ್ಸ್ ಮಾಡಿಕೊಂಡು ಪಾಲುದಾರಿಕೆ ಹೆಸರಿನಲ್ಲಿ ಟೆಂಡರ್ನಲ್ಲಿ ಹಾಕಿಸುವುದು, ಸಿಂಡಿಕೇಟ್ ರಚಿಸಿ ಸಚಿವರ ಹೆಸರೇಳಿಕೊಂಡು ಹಣ ವಸೂಲಿ, ಒಂದೊಂದು ಉಪಕರಣಕ್ಕೆ ವಿಭಿನ್ನ ಕಮಿಷನ್ ನಿಗದಿ, ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ಕೊಡಿಸುವುದು, ಯಾವುದೇ ಉಪಕರಣ ಸರಬರಾಜು ಮಾಡದಿರುವ ಕಂಪನಿಗೆ ಟೆಂಡರ್ ನೀಡುವಂತೆ ಡೀಲ್ ಮಾಡುವುದು ಈತನ ಖಾಯಲಿಯಾಗಿದೆ ಎಂಬುದು ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನಿಗಮದಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಟೆಂಡರ್ಗೆ ಸಂಬಂಧಪಟ್ಟಂತೆ ಯಾವುದೇ ಕೆಲಸಗಳು ಆಗಬೇಕೆಂದರೆ ಈತನ ಅಪ್ಪಣೆ ಬೇಕು ಬೇಕು. ಈತನ ಅನುಮತಿಯಿಲ್ಲದೆ ನಿಗಮದಲ್ಲಿ ಹುಲ್ಲುಕಡ್ಡಿಯೂ ಅಲ್ಲಾಡುವಂತಿಲ್ಲ. ಕಮಿಷನ್ ಕೊಡಿಸುವುದಾಗಿ ಆಸೆ ತೋರಿಸಿ ಸಚಿವರ ಆಪ್ತರಿಂದ ಈಗಾಗಲೇ ವಿಶ್ವಾಸ ಗಿಟ್ಟಿಸಿಕೊಂಡಿದ್ದಾನೆ ಎನ್ನಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಆರ್ಟಿಪಿಸಿಆರ್ ಕಿಟ್ನಿಂದ ಹಿಡಿದು ಪಿಪಿಇ ಕಿಟ್ವರೆಗೆ ಈತನ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಆರೋಪಗಳು ಕೇಳಿ ಬಂದಿವೆ. ಇದನ್ನು ಆರೋಗ್ಯ ಸಚಿವರು ಗಮನಿಸಿ, ಇದ್ದಕ್ಕೆ ಬ್ರೇಕ್ ಹಾಕಬೇಕು. ಅರ್ಹರಿಗೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಟೆಂಡರ್ ಸಿಗುವಂತೆ ಆಗಬೇಕು. ಆ ನಿಟ್ಟಿನಲ್ಲಿ ಸಚಿವರು ನಡೆಯನ್ನು ತೋರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
