ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣ ಬಾರೀ ಸದ್ದು ಮಾಡಿತ್ತು, ರಾಜ್ಯ ಸರ್ಕಾರ ಎಸ್ಐಟಿ ರಚಿಸಿ, ಪ್ರಕರಣದ ತನಿಕೆಯನ್ನು ಎಸ್ಐಟಿ ತಂಡಕ್ಕೆ ವರ್ಗಾವಣೆ ಮಾಡಿತ್ತು. ನಂತರ ಎಸ್ಐಟಿ ತನಿಖೆ ಶುರುವಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು ಹದಿನೇಳು ಕಡೆಗಳಲ್ಲಿ ಉತ್ಖನನ ಕೂಡ ನಡೆಯಿತು. ಆದ್ರೆ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿ ದುಡಿದವರ ದುಡ್ಡು ಪಾವತಿ ಮಾತ್ರ ಇನ್ನೂ ಬಾಕಿ ಇದೆ.
2025ರ ಜುಲೈ 28ರಂದು ಚಿನ್ನಯ್ಯನನ್ನು ಎಸ್ಐಟಿ ತಂಡ ಮಾಸ್ಕ್ ಹಾಕಿ ಕರೆದುಕೊಂಡು ಬಂದು ಸ್ಥಳ ಗುರುತು ಮಾಡಲಾಯಿತು. ಅಂದೂ ಕೂಡ ಎಸ್ಐಟಿ ತಂಡದ ಸಹಾಯಕ್ಕೆ ಕೂಲಿಯಾಳುಗಳು ದುಡಿದಿದ್ದರು. ಮರುದಿನ 29ರಂದು ಉತ್ಖನನ ಪ್ರಕ್ರಿಯೆ ಮಾನವ ಶ್ರಮದ ಮೂಲಕ ಶುರುವಾಯಿತು. ಆ ಬಳಿಕ ಮಣ್ಣು ಅಗೆತ ಕಷ್ಟವಾದಾಗ ಜೆಸಿಬಿ ತರಿಸಲಾಯಿತು. ಬಳಿಕ ಹಲವು ದಿನಗಳ ವರೆಗೂ ಮಾನವ ಶ್ರಮ ಹಾಗೂ ಜೆಸಿಬಿ ಮೂಲಕ ಕೆಲಸ ನಡೆಯಿತು.
ಆಗಸ್ಟ್ 13 ವರೆಗೂ ಉತ್ಖನನ ನಡೆಸಿತ್ತು. 2,3,4,5 ಪಾಯಿಂಟ್ ಹೊರತು ಪಡಿಸಿ ಉಳಿದ ಎಲ್ಲ ಪಾಯಿಂಟ್ ನಲ್ಲೂ ಜೆಸಿಬಿ ಕೆಲಸ ಮಾಡಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. 13 ನೇ ಪಾಯಿಂಟ್ ದೊಡ್ಡದಾಗಿ ಅಗೆದ ಕಾರಣ ಸಣ್ಣ ಹಾಗೂ ದೊಡ್ಡ ಎರಡು ಜೆಸಿಬಿ ಬಳಸಲಾಗಿತ್ತಿತ್ತು. ಅಲ್ಲದೇ ಕೆಲ ದಿನಗಳಲ್ಲಿ ಜೆಸಿಬಿ ಬೇಕಾಗುತ್ತದೆ ಬೇರೆ ಹೋಗಬೇಡಿ ಅಂತ ಜೆಸಿಬಿಯನ್ನು ಸುಮ್ಮನೆ ನಿಲ್ಲಿಸಿದ್ದರು. ಇದನ್ನು ಜೆಸಿಬಿ ಮಾಲಿಕರು ಲೆಕ್ಕ ಹಾಕದೇ ಕೇವಲ ದುಡಿದ ಗಂಟೆಯನ್ನು ಮಾತ್ರ ಲೆಕ್ಕ ಹಾಕಿ ಒಟ್ಟು 71,500.
2025 ಜುಲೈ ತಿಂಗಳ 28ರಂದು ಚಿನ್ನಯ್ಯನನ್ನು ಕಡೆದುಕೊಂಡು ಬಂದು ಮೊದಲು ಪಾಯಿಂಟ್ ಗುರುತು ಮಾಡುವಲ್ಲಿಂದ ಆರಂಭಗೊಂಡು ಆಗಸ್ಟ್ 13ರಂದು ಉತ್ಖನನ ಕೊನೆಗೊಳ್ಳುವವರೆಗೂ ಬೇರೆ ಬೇರೆ ಪಂಚಾಯತ್ ವ್ಯಾಪ್ತಿಯ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು. ದಿನನಿತ್ಯ 10/ 12 ಮಂದಿ ಕಾರ್ಮಿಕರು ಎಸ್ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು ಆದರೆ ಇದುವರೆಗೂ ಕಾರ್ಮಿಕರ ಕೂಲಿ ಕೊಡದೇ ಬಾಕಿ ಉಳಿಸಿಕೊಂಡಿದೆ. ಕಾರ್ಮಿಕರದ್ದು ಒಟ್ಟು ಎಂಬತ್ತು ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಕಾರ್ಮಿಕರು ದುಡಿದ ಹಣಕ್ಕೆ ಅಲೆದಾಡುವಂತಾಗಿದೆ.
ಜೆಸಿಬಿ, ಕೂಲಿಯಾಳುಗಳ ಹಣ ಮಾತ್ರವಲ್ಲ, ಕೆಲ ದಿನಗಳಲ್ಲಿ ಎಸ್ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲ್, ಕೂಲಿಯಾಳುಗಳನ್ನು ಕರೆತಂದು ವಾಹನ ಬಾಡಿಗೆ ಹೀಗೆ ಒಟ್ಟು ಎರಡು ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಕೊಡುವುದಿದೆ.
ಎಸ್ಐ ಟಿ ತಂಡಕ್ಕೆ ಬೇಕಾದ ಕೂಲಿಯಾಳುಗಳು, ಜೆಸಿಬಿ, ಇತರೆ ಸಾಮಾಗ್ರಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಸ್ಥಳೀಯ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ವಹಿಸಲಾಗಿತ್ತು. ಅದರಂತೆ ಸ್ಥಳೀಯ ಗ್ರಾಮ ಪಂಚಾಯತ್ ಎಸ್ಐಟಿ ತಂಡದ ನಿರ್ದೇಶನದಂತೆ ಎಲ್ಲ ಅಗತ್ಯತೆಯನ್ನು ಒದಗಿಸಿದ್ದರು. ಆದರೆ ಪಂಚಾಯತ್ ಹಣವನ್ನು ಎಸ್ಐಟಿ ಕೆಲಸಕ್ಕೆ ಭರಿಸುವಂತಿಲ್ಲ ಎನ್ನಲಾಗಿದೆ. ಇವುಗಳನ್ನು ಎಸ್ಐಟಿ ಟೀಮ್ ಭರಿಸಬೇಕಂತೆ. ಹೀಗಾಗಿ ಬಾಕಿ ಬಿಲ್ ನ್ನು ಯಾರಲ್ಲಿ ಕೇಳುವುದು ಎನ್ನುವ ಗೊಂದಲವಿದೆ..
ಬಾಕಿ ಬಿಲ್ ಪಾವತಿ ಬಗ್ಗೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಬಂದು ವಿಚಾರಿಸಿದರೆ ನಿಮ್ಮ ಬಿಲ್ ಕಳುಹಿಸಲಾಗಿದೆ ಎನ್ನುವ ಹಾರಿಕೆ ಉತ್ತರ ನೀಡಲಾಗುತ್ತದೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ಆದ ಕಾರಣ ಜೋರು ಮಾಡಿ ಹಣ ಕೇಳುವಂತೆಯೂ ಇಲ್ಲ ಹೀಗಾಗಿ ಸಂಕಷ್ಟದಲ್ಲಿ ಸಿಲುಕಿ ಹಾಕಿ ಕೊಂಡ ಪರಿಸ್ಥಿತಿ ಕಾರ್ಮಿಕರು, ಜೆಸಿಬಿ ಮಾಲೀಕರು ಹಾಗೂ ಉಳಿದವರದ್ದು..
ನಮ್ಮ ಬಾಡಿಗೆ ಹಣ ಸಿಗದೇ ಹತ್ತು ತಿಂಗಳು ಆಗಿದೆ. ಹಣ ಯಾರಲ್ಲಿ ಕೇಳುವುದು ಎನ್ನುವ ಗೊಂದಲ ಇದೆ. ಪಂಚಾಯತ್, ಜಿಲ್ಲಾ ಪಂಚಾಯತ್ ನಲ್ಲಿ ಕೇಳಿದರೆ ನಾವು ಹಣ ಪಾವತಿ ಮಾಡುದಕ್ಕೆ ಆಗುದಿಲ್ಲ ಎನ್ನುತ್ತಾರೆ. ಎಸ್ಐಟಿ ಬಳಿಯೂ ಹಣದ ಬಗ್ಗೆ ಕೇಳಿದ್ದೇವೆ. ಯಾವಗ ನಮ್ಮ ಬಾಡಿಗೆ ಹಣ ಕೊಡುತ್ತಾರೋ ಗೊತ್ತಿಲ್ಲ. ಸರ್ಕಾರ ನಮಗೆ ನೀಡಬೇಕಾದ ಬಾಡಿಗೆ ಹಣ ಬೇಗ ನೀಡಬೇಕು.
