ಮಂಗಳೂರು: ನಗರದ ಗದ್ದಲದ ಟ್ರಾಫಿಕ್ ನಡುವೆಯೇ ವರ್ಷಗಳ ಕಾಲ ಜನರ ಸುರಕ್ಷತೆಗಾಗಿ ದುಡಿದ ವ್ಯಕ್ತಿ. ಯಾವುದೇ ಹುದ್ದೆಯ ಆಸೆ ಇಲ್ಲದೆ, ಯಾವುದೇ ರಾಜಕೀಯ ಬೆಂಬಲವಿಲ್ಲದೆ, ಕೇವಲ ಸಮಾಜ ಸೇವೆಯ ಮನೋಭಾವದಿಂದ ರಸ್ತೆಗೆ ಇಳಿದ ವ್ಯಕ್ತಿ. ಅವರೇ ಮಂಗಳೂರಿನ “ಪೀಸ್ ಮೇಕರ್” ಎಂದೇ ಗುರುತಿಸಿಕೊಂಡಿರುವ ಅಬ್ದುಲ್ ರೌಫ್.

ಟ್ರಾಫಿಕ್ ಜಾಮ್ ಆದಾಗ ಮೊದಲು ನೆನಪಾಗುವ ಹೆಸರು, ಗಲಾಟೆ ನಡೆದಾಗ ಶಾಂತಿ ಕಾಪಾಡಲು ಓಡಿಬರುವ ಮುಖ, ಮಸೀದಿ-ದೇವಾಲಯದ ಬಳಿಯ ಸೂಕ್ಷ್ಮ ಪರಿಸ್ಥಿತಿಯಲ್ಲೂ ಸಮಾಧಾನದಿಂದ ಕರ್ತವ್ಯ ನಿರ್ವಹಿಸುವ ಮಾನವೀಯ ವ್ಯಕ್ತಿತ್ವ – ಇಂತಹ ಸೇವೆಗೆ ಇಂದಿಗೂ ರಾಜ್ಯ ಮಟ್ಟದ ಮಾನ್ಯತೆ ಸಿಗದಿರುವುದು ಹಲವರ ಪ್ರಶ್ನೆಯಾಗುತ್ತಿದೆ.

8ನೇ ತರಗತಿವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ ರೌಫ್, ಮನೆಯ ಬಡತನದ ಕಾರಣ ಬಾಲ್ಯದಲ್ಲೇ ಕೆಲಸಕ್ಕೆ ಇಳಿದರು. ತಂದೆಯ ಅಗಲಿಕೆಯ ನಂತರ ತಾಯಿಯ ಹೊರೆ ಕಡಿಮೆ ಮಾಡಲು ಜೀವನವನ್ನೇ ಹೋರಾಟಕ್ಕೆ ಸಮರ್ಪಿಸಿದರು. ಪ್ರೊವಿಷನ್ ಅಂಗಡಿಯಲ್ಲಿ 18 ವರ್ಷ ದುಡಿದು, ಬಳಿಕ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡ್ರೈನೇಜ್ ಪಂಪ್ ಆಪರೇಟರ್ ಆಗಿ ಕೆಲಸ ಆರಂಭಿಸಿದರು.
ಆದರೆ ಸಂಬಳಕ್ಕಾಗಿ ಮಾತ್ರ ಬದುಕದ ರೌಫ್, ನಗರದ ಟ್ರಾಫಿಕ್ ಸಮಸ್ಯೆ ಕಂಡಾಗ ಸ್ವಯಂಪ್ರೇರಿತವಾಗಿ ರಸ್ತೆಗೆ ಇಳಿದು ವಾಹನ ಸಂಚಾರ ಸುಗಮಗೊಳಿಸಲು ಆರಂಭಿಸಿದರು. ಯಾವುದೇ ಅಧಿಕಾರವಿಲ್ಲದೇ ಆರಂಭವಾದ ಸೇವೆ, ಬಳಿಕ ಟ್ರಾಫಿಕ್ ವಾರ್ಡನ್ ಸ್ಕ್ವಾಡ್ ಹಾಗೂ ಹೋಮ್ ಗಾರ್ಡ್ ಹುದ್ದೆಯವರೆಗೆ ಅವರನ್ನು ಕರೆದುಕೊಂಡು ಹೋಯಿತು.

“ಇಂತಹ ವ್ಯಕ್ತಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಯಾಕೆ ಸಿಗಬಾರದು?”
62ಕ್ಕೂ ಹೆಚ್ಚು ಸನ್ಮಾನಗಳನ್ನು ಪಡೆದಿರುವ ಅಬ್ದುಲ್ ರೌಫ್ ಅವರಿಗೆ ಇನ್ನೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ಸಾರ್ವಜನಿಕರ ಪ್ರಶ್ನೆಯಾಗುತ್ತಿದೆ.
ಮಂಗಳೂರು ನಗರದ ಟ್ರಾಫಿಕ್ ನಿಯಂತ್ರಣದಲ್ಲಿ ಇಷ್ಟೊಂದು ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಜಿಲ್ಲಾಡಳಿತ ಯಾಕೆ ಗುರುತಿಸುತ್ತಿಲ್ಲ?
ರಾಜಕೀಯ ನಾಯಕರ ಕಣ್ಣಿಗೆ ಇವರ ಸೇವೆ ಕಾಣುತ್ತಿಲ್ಲವೇ?
ಸಮಾಜದ ಶಾಂತಿ ಕಾಪಾಡಿದ “ಪೀಸ್ ಮೇಕರ್”ಗೆ ಸರ್ಕಾರದ ಮಾನ್ಯತೆ ಸಿಗಬಾರದೇ?
ಸಾವಿರಾರು ಜನರ ಜೀವ ರಕ್ಷಿಸಲು ಟ್ರಾಫಿಕ್ ನಡುವೆ ನಿಂತ ಈ ವ್ಯಕ್ತಿಯ ಸೇವೆ ರಾಜ್ಯ ಮಟ್ಟದಲ್ಲಿ ಗೌರವಕ್ಕೆ ಅರ್ಹವಲ್ಲವೇ?

ಇಂದಿಗೂ ಸ್ವಂತ ಮನೆ ಇಲ್ಲ…
ನಗರದ ಟ್ರಾಫಿಕ್ ವ್ಯವಸ್ಥೆಗೆ ವರ್ಷಗಳ ಕಾಲ ಬೆನ್ನೆಲುಬಾಗಿ ನಿಂತ ಈ ವ್ಯಕ್ತಿ, ಇಂದಿಗೂ ಸ್ವಂತ ಮನೆಯಿಲ್ಲದೆ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಎನ್ನುವುದು ನೋವಿನ ಸಂಗತಿ. ತಿಂಗಳಿಗೆ ಕೇವಲ ₹9750 ಸಂಬಳದಲ್ಲಿ ಪತ್ನಿ ಜೀನತ್ ಹಾಗೂ ನಾಲ್ಕು ಮಕ್ಕಳ ಜವಾಬ್ದಾರಿ ಹೊತ್ತಿರುವ ರೌಫ್, “ಒಂದು ಮನೆ ಸಿಕ್ಕರೆ ಸಾಕು” ಎಂಬ ಸರಳ ಕನಸಿನೊಂದಿಗೆ ಬದುಕುತ್ತಿದ್ದಾರೆ.
ಮಂಗಳೂರಿನ ಟ್ರಾಫಿಕ್, ಧಾರ್ಮಿಕ ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿಯ ನಡುವೆ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ರೌಫ್ ಅವರಂತಹ ವ್ಯಕ್ತಿಗಳೇ ನಿಜವಾದ ಸಮಾಜದ ಹೀರೋಗಳು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಇದೀಗ ಪ್ರಶ್ನೆ ಒಂದೇ…
ಇಂತಹ ಸೇವಾಭಾವಿ ವ್ಯಕ್ತಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಯಾಕೆ ಯಾವುದೇ ಜಿಲ್ಲಾಡಳಿತದವರಾಗಲಿ, ರಾಜಕೀಯದವರಗಲಿ ಮುಂದೆ ಬರುತ್ತಿಲ್ಲ? ಎಂದು.
