ಬೆಳಗಾವಿ: ಜಿಲ್ಲೆಯಲ್ಲಿ ಸಿನಿಮಾ ಮಾದರಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಜೀವನ ನಡೆಸಲು ಪತಿಯ ಮನೆಗೇ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕಟಕೋಳ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ನಡೆದಿದ್ದೇನು?
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಈ ವಿಚಿತ್ರ ಕಳ್ಳತನ ನಡೆದಿದೆ. ಮೂಲತಃ ಮೂಡಲಗಿ ತಾಲೂಕಿನವಳಾದ ಹಸೀನಾ ನದಾಫ್ ಎಂಬಾಕೆಗೆ ಎರಡು ತಿಂಗಳ ಹಿಂದೆಯಷ್ಟೇ ಹೊಸಕೋಟೆ ಗ್ರಾಮದ ಶರೀಫ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ, ಹಸೀನಾ ಮದುವೆಗಿಂತ ಮುಂಚೆಯೇ ಹಣಮಂತ ಮಾರಾಪೂರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಯಾದ ಬಳಿಕವೂ ಆಕೆಯ ಪ್ರೇಮ ಪುರಾಣ ಮುಂದುವರಿದಿತ್ತು.
ತನ್ನ ಪ್ರಿಯಕರನ ಜೊತೆ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದ ಹಸೀನಾ, ಅದಕ್ಕೆ ಬೇಕಾದ ಹಣಕ್ಕಾಗಿ ಪತಿಯ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದಳು. ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ, ಸುಮಾರು 21 ಲಕ್ಷ ರೂಪಾಯಿ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಹಾಗೂ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪ್ರಿಯಕರನ ಜೊತೆ ಪರಾರಿಯಾಗಿದ್ದಳು.
48 ಘಂಟೆಗಳಲ್ಲಿ ಪರಾರಿಯಾದವರನ್ನು ಹಿಡಿದ ಪೊಲೀಸರು
ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾದ ಬಗ್ಗೆ ಶರೀಫ್ ಅವರ ಸಂಬಂಧಿ ದಿಲ್ಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಹಸೀನಾ ಮೇಲೆ ಅನುಮಾನ ವ್ಯಕ್ತವಾಗಿದೆ. ದೂರು ದಾಖಲಾದ ಕೇವಲ 48 ಗಂಟೆಗಳ ಒಳಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹಸೀನಾ ಮತ್ತು ಆಕೆಯ ಪ್ರಿಯಕರ ಹಣಮಂತ ಮಾರಾಪೂರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟಕೋಳ ಪೊಲೀಸರು ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
