ಕೌಟುಂಬಿಕ ಆಸ್ತಿ ವಿವಾದಗಳ ಇತ್ಯರ್ಥಕ್ಕಾಗಿ ಕ್ರಿಮಿನಲ್ ಕಾನೂನನ್ನು ಒತ್ತಡ ತಂತ್ರವಾಗಿ ಅಥವಾ ಚೌಕಾಸಿಯ ಅಸ್ತ್ರವಾಗಿ ಬಳಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 73 ವರ್ಷದ ವೃದ್ಧ ತಾಯಿ ಹಾಗೂ ಅವರ ಹಿರಿಯ ಮಗಳ ವಿರುದ್ಧ ಕಿರಿಯ ಮಗಳು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಖಾಸಗಿ ಜಗಳಗಳಲ್ಲಿ ಅನುಕೂಲ ಪಡೆಯಲು ಕಾನೂನು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತೀವ್ರವಾಗಿ ತಖ್ಖೆ ಮಾಡಿದೆ.
ಅರ್ಜಿದಾರರಾದ 73 ವರ್ಷದ ವೃದ್ಧೆ ಹಾಗೂ ಅವರ ಹಿರಿಯ ಮಗಳು ತಮ್ಮ ವಿರುದ್ಧ ಕಿರಿಯ ಮಗಳು ದಾಖಲಿಸಿದ್ದ ಎಫ್ಐಆರ್ (FIR) ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ವೃದ್ಧೆಯ ಪರವಾಗಿ ತೀರ್ಪು ನೀಡಿ, ಅವರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ತನಿಖಾ ಪ್ರಕ್ರಿಯೆಯನ್ನು ಪೂರ್ಣವಾಗಿ ರದ್ದುಗೊಳಿಸಿ ಆದೇಶಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಎರಡನೇ ಪ್ರತಿವಾದಿಯಾಗಿರುವ ಕಿರಿಯ ಮಗಳು ಸದ್ಯ ಸಿಂಗಾಪುರದಲ್ಲಿ ನೆಲೆಸಿದ್ದು, ತಮ್ಮ ದಿವಂಗತ ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಈಗಾಗಲೇ ದಾವೆ ಹೂಡಿದ್ದಾರೆ. ಆದರೆ, ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿರುವಾಗಲೇ, ಆಸ್ತಿ ವಿಚಾರದಲ್ಲಿ ತಾಯಿ ಮತ್ತು ಹಿರಿಯ ಸಹೋದರಿಯ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬಲವಂತವಾಗಿ ಕ್ರಿಮಿನಲ್ ದೂರು ನೀಡಿ ಎಫ್ಐಆರ್ ದಾಖಲಿಸಿದ್ದರು. ಈ ನಡೆಯು ಕಾನೂನುಬಾಹಿರ ಹಾಗೂ ಸ್ವೀಕಾರಾರ್ಹವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ತೀರ್ಪಿನಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವ ನ್ಯಾಯಪೀಠ, “ನಾಗರಿಕ ಹಕ್ಕುಗಳನ್ನು ಪಡೆಯಲು ಅಥವಾ ಆಸ್ತಿ ಪಾಲು ದಾವೆಯಲ್ಲಿ ತಮ್ಮ ಶಕ್ತಿ ವರ್ಧಿಸಿಕೊಂಡು ಎದುರಾಳಿಗಳನ್ನು ಮಣಿಸಲು ಕ್ರಿಮಿನಲ್ ಕಾನೂನನ್ನು ಆಯುಧವನ್ನಾಗಿ ಮಾಡಿಕೊಳ್ಳಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ಆಸ್ತಿ ಹಂಚಿಕೆಯಂತಹ ಕುಟುಂಬದ ಹಕ್ಕುಗಳನ್ನು ಪಡೆದುಕೊಳ್ಳಲು ಸಿವಿಲ್ ದಾವೆಯೊಂದೇ ಸೂಕ್ತ ಮತ್ತು ಕಾನೂನುಬದ್ಧ ಮಾರ್ಗವಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
ಕೊನೆಯದಾಗಿ, ಸ್ವಂತ ಲಾಭಕ್ಕಾಗಿ ಮತ್ತು ಕುಟುಂಬದ ಆಂತರಿಕ ಜಗಳಗಳಲ್ಲಿ ಮೇಲುಗೈ ಸಾಧಿಸಲು ರಾಜ್ಯದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದಾಳವಾಗಿ ಬಳಸಿಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಎಚ್ಚರಿಸಿದ ಹೈಕೋರ್ಟ್, ಹಿರಿಯ ನಾಗರಿಕರಿಗೆ ಕ್ರಿಮಿನಲ್ ಪ್ರಕರಣದ ಮೂಲಕ ಅನಗತ್ಯ ಕಿರುಕುಳ ನೀಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ತಳೆದಿದೆ.















