ಬೆಳ್ತಂಗಡಿ: ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಹಾವು ಕಚ್ಚಿದ ಆತಂಕಕಾರಿ ಘಟನೆ ಮಂಗಳವಾರ ನಡೆದಿದೆ.
ಹಾವು ಕಚ್ಚಿದ್ದರಿಂದ ಅಸ್ವಸ್ಥಗೊಂಡಿರುವ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಶಿಹಾಬ್ ಎಂಬವರ ಪುತ್ರಿ ಫಾತಿಮತ್ ಸಅದಿಯಾ(4) ಹಾವು ಕಚ್ಚಿದ್ದರಿಂದ ಅಸ್ವಸ್ಥಗೊಂಡ ಬಾಲಕಿ.
ಮಾಹಿತಿಯ ಪ್ರಕಾರ ಫಾತಿಮತ್ ಸಅದಿಯಾ ಎಂದಿನಂತೆ ಮಂಗಳವಾರವೂ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ತರಗತಿ ಕೊಠಡಿಯೊಳಗೆ ಆಟಿಕೆಗಳ ನಡುವೆ ಅಡಗಿದ್ದ ಹಾವು ಬಾಲಕಿಗೆ ಕಚ್ಚಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಅಂಗನವಾಡಿ ಸಹಾಯಕಿ ಕೂಡಲೇ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸಂದರ್ಭ ಅಂಗನವಾಡಿ ಶಿಕ್ಷಕಿ ಬಿ.ಎಲ್.ಓ. ಕರ್ತವ್ಯದ ನಿಮಿತ್ತ ಹೊರಗಡೆ ತೆರಳಿದ್ದರಿಂದ ಕೇಂದ್ರದಲ್ಲಿ ಸಹಾಯಕಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ.
ಬಾಲಕಿಯನ್ನು ತಕ್ಷಣ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಮಂಗಳೂರಿನ ವೆನ್ಹಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬಾಲಕಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
