ಮಂಗಳೂರು : ವಿಶ್ವ ತುಳುವೇರ್ (ರಿ.) ಮಂಗಳೂರು ವತಿಯಿಂದ ತುಳು ಭಾಷೆ, ಲಿಪಿ ಹಾಗೂ ತುಳುನಾಡಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ತುಳು ಲಿಪಿ ಕಲಿಕಾ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ಆ.16ರಂದು ಕದ್ರಿ ಮಲ್ಲಿಕಟ್ಟೆಯ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಸಹಕಾರಿ ಸಂಘ ಮತ್ತು ಸಂಘಗಳ ನೋಂದಣಿ ಇಲಾಖೆಯ ಹಿರಿಯ ಸಬ್ ಇನ್ಸ್ಪೆಕ್ಟರ್ ಶ್ರೀಯುತ ವಿಲಾಸ್ ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಳು ಭಾಷೆಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳೊಂದಿಗೆ ಮನೆಯಲ್ಲಿ ತುಳುವಿನಲ್ಲೇ ಮಾತನಾಡುವ ಅಭ್ಯಾಸ ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಸಂಘಟನೆಯ ಸ್ಥಾಪಕಾಧ್ಯಕ್ಷ ಶ್ರೀಯುತ ದಯಾನಂದ ಅವರು ಸ್ವಾಗತ ಭಾಷಣ ಮಾಡಿದರು. ಕೇಂದ್ರ ಸಮಿತಿ ಉಪಾಧ್ಯಕ್ಷ ಲl ಡಾ. ಗಣೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಾಗವಹಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಹಿಳಾ ಕಾರ್ಯಾಧ್ಯಕ್ಷೆ ಶಶಿಕಲಾ ಅವರು ತುಳು ಭಾಷೆ ಮತ್ತು ಲಿಪಿಯ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಶ್ರೀಮತಿ ನಿರ್ಮಲಾ ಪ್ರಮೋದ್ ಅವರು ಕಾರ್ಯಕ್ರಮದ ನಿರೂಪಣೆ (MC) ಜವಾಬ್ದಾರಿಯನ್ನು ನಿರ್ವಹಿಸಿ, ದಿನಪೂರ್ತಿ ನಡೆದ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಾಗವಾಗಿ ನಡೆಸಿಕೊಟ್ಟರು. ಪಿ.ಟಿ. ಮಾಸ್ಟರ್ ನಾಗರಾಜ್ ಅವರು ಕ್ರೀಡಾ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ರೈಂ ವಾರ್ತೆ ಸಂಪಾದಕರು ಅಬ್ದುಲ್ ವಹೀದ್ , ಶ್ರೀಯುತ ಭರತ್ ಕುಮಾರ್, ವಿಶ್ವ ತುಳುವೇರ್ನ ಕೇಂದ್ರ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಸಲಹೆಗಾರರು, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ವಿವಿಧ ವಿಭಾಗಗಳ ಸಂಯೋಜಕರು ಸಹ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಸಂಘಟನೆಯ ಸ್ಥಾಪಕಾಧ್ಯಕ್ಷರು ಮುಂದಿನ ಕಾರ್ಯವೈಖರಿಯ ಬಗ್ಗೆ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ನಂತರ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. ಬಳಿಕ ಶ್ರೀಮತಿ ಲಲಿತಾ ಅವರು ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಅತಿಥಿಗಳು, ಶಿಕ್ಷಕರು, ಸ್ವಯಂಸೇವಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ವಿಶೇಷವಾಗಿ ಸ್ಥಳೀಯ ಶಾಲಾ ಆಡಳಿತ ಮಂಡಳಿ ಹಾಗೂ ಸ್ವಯಂಸೇವಕರ ಸಹಕಾರವನ್ನು ಅವರು ಪ್ರಶಂಸಿಸಿದರು.

ತುಳು ಲಿಪಿ ಕಲಿಕಾ ಸ್ಪರ್ಧೆ
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಎರಡು ನಿಮಿಷದ ತುಳು ಲಿಪಿ ಬರವಣಿಗೆ ಸ್ಪರ್ಧೆಯಲ್ಲಿ 62 ಮಂದಿ ಭಾಗವಹಿಸಿ ಗಮನಾರ್ಹ ದಾಖಲೆ ನಿರ್ಮಿಸಿದರು. ಆರಂಭಿಕ ಹಂತದಲ್ಲಿ ಐದು ನಿಮಿಷಗಳ ಕಾಲ ತುಳು ಲಿಪಿಯ ಮಾದರಿ ನೀಡಲಾಗಿದ್ದು, ಬಳಿಕ ಕೇವಲ ಎರಡು ನಿಮಿಷಗಳಲ್ಲಿ ಅದನ್ನು ನೆನಪಿನಿಂದ ಬರೆಯುವ ಸವಾಲು ನೀಡಲಾಯಿತು.

ತುಳು ಲಿಪಿಯನ್ನು ಅಚ್ಚುಕಟ್ಟಾಗಿ ಹಾಗೂ ಸ್ಪಷ್ಟವಾಗಿ ಬರೆದವರಲ್ಲಿ ಪ್ರಥಮ ಸ್ಥಾನವನ್ನು ಜನ್ವಿತ್ ಶೆಟ್ಟಿ, ಎಸ್.ಡಿ.ಎಂ. ಶಾಲೆ, ಅಶೋಕನಗರ, ಮಂಗಳೂರು, ಹಾಗೂ ದ್ವಿತೀಯ ಸ್ಥಾನವನ್ನು ಕುಮಾರಿ ಸಹಜ್ಞ, ಆಳ್ವಾಸ್ ಕಾಲೇಜು, ಮೂಡುಬಿದಿರೆ, ಪಡೆದುಕೊಂಡರು. ವಿಜೇತರ ಆಯ್ಕೆಯನ್ನು ಶ್ರೀಯುತ ಜಿ.ವಿ.ಎಸ್. ಉಳ್ಳಾಲ್ ಹಾಗೂ ರಾಜೇಶ್ ಉಳ್ಳಾಲ್ ಅವರ ತಂಡ ನಡೆಸಿತು.

ವಿವಿಧ ಸ್ಪರ್ಧೆಗಳ ವಿಜೇತರು
ಚೆನ್ನೆದ ಮನೆ – ಮಹಿಳಾ ವಿಭಾಗ: ಪ್ರಥಮ – ಸಂಧ್ಯಾ, ಮೂಡುಬಿದಿರೆ; ದ್ವಿತೀಯ – ಮೋಹಿನಿ, ಮಂಗಳೂರು.
ಚೆನ್ನೆದ ಮನೆ – ಪುರುಷರ ವಿಭಾಗ: ಪ್ರಥಮ – ಪ್ರವೀಣ್ ಶೆಟ್ಟಿ ಪುತ್ತಿಗೆ, ಮೂಡುಬಿದಿರೆ; ದ್ವಿತೀಯ – ಜಗನ್ನಾಥ ಶೆಟ್ಟಿ ಪಡಿಲ್, ಮಂಗಳೂರು.
ಲಗೋರಿ – ಮಹಿಳಾ ವಿಭಾಗ: ಪ್ರಥಮ – ಹೇಮಲತಾ ಕೆ. ಮತ್ತು ತಂಡ; ದ್ವಿತೀಯ – ನಿಶಾ ಮತ್ತು ತಂಡ.
ಲಗೋರಿ – ಪುರುಷರ ವಿಭಾಗ: ಪ್ರಥಮ – ಪ್ರವೀಣ್ ಶೆಟ್ಟಿ ಪುತ್ತಿಗೆ ಮತ್ತು ತಂಡ; ದ್ವಿತೀಯ – ಡಿ.ಟಿ. ಪ್ರಮೋದ್ ದೇವಾಡಿಗ ಮತ್ತು ತಂಡ; ತೃತೀಯ – ವಿಜಯ್ ಪ್ರಭು ಮತ್ತು ತಂಡ.

12 ವರ್ಷ ವಯಸ್ಸಿನ ಮಕ್ಕಳಿಂದ 78 ವರ್ಷ ವಯಸ್ಸಿನ ಹಿರಿಯರ ತನಕ ವಿವಿಧ ವಯೋಮಾನದವರು ಉತ್ಸಾಹದಿಂದ ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಕೊಂಬು ವಾದ್ಯದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಸ್ಪರ್ಧೆಗಳು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾದವು.
















